ಕಚ್ಚೆ ಹಾಕಿಕೊಂಡು ದಿನವಿಡೀ ಟೆಂಪಲ್ ರನ್ ಮಾಡಿದ ಕಿಚ್ಚ ಸುದೀಪ್

Krishnaveni K

ಶನಿವಾರ, 27 ಏಪ್ರಿಲ್ 2024 (15:55 IST)
Photo Courtesy: Twitter
ರಾಯಚೂರು: ಶೂಟಿಂಗ್ ನಿಂದ ಕೊಂಚ ಬಿಡುವು ಪಡೆದಿರುವ ಕಿಚ್ಚ ಸುದೀಪ್ ಇಂದು ದಿನವಿಡೀ ಪತ್ನಿ ಜೊತೆ ಟೆಂಪಲ್ ರನ್ ನಡೆಸಿದ್ದಾರೆ. ಮಂತ್ರಾಲಯ ಮತ್ತು ರಾಯಚೂರಿನ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಮೊದಲು ರಾಯಚೂರಿನ ಹನುಮ ದೇವಾಲಯಕ್ಕೆ ಭೇಟಿ ನೀಡಿದ ಸುದೀಪ್ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅವರು ಪಂಚೆ ಮತ್ತು ಜುಬ್ಬಾ ತೊಟ್ಟುಕೊಂಡು ಗಮನ ಸೆಳೆದರು. ಪತ್ನಿ ಪ್ರಿಯಾ ಸುದೀಪ್ ಕೂಡಾ ಸಾಥ್ ನೀಡಿದ್ದಾರೆ. ಸುದೀಪ್ ಬಂದ ಸುದ್ದಿ ತಿಳಿದು ಅನೇಕ ಅಭಿಮಾನಿಗಳು ದೇವಾಲಯದ ಸುತ್ತ ಜಮಾಯಿಸಿದ್ದರು. ಸುದೀಪ್ ವಾಹನಕ್ಕೆ ಮುತ್ತಿಗೆ ಹಾಕಿ ಸೆಲ್ಫೀಗಾಗಿ ಮುಗಿಬಿದ್ದರು.

ಇದಾದ ಬಳಿಕ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಸನ್ನಿಧಾನಕ್ಕೆ ಭೇಟಿ ನೀಡಿದರು. ಈ ವೇಳೆ ಸುದೀಪ್ ಕಚ್ಚೆ ಪಂಚೆ ಹಾಕಿಕೊಂಡು ಗಮನ ಸೆಳೆದರು. ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪೂಜೆ ಸಲ್ಲಿಸಿದ ಬಳಿಕ ಅಲ್ಲಿಯೂ ಅವರನ್ನು ನೋಡಲು ಜನ ಸಾಗರವೇ ಹರಿದುಬಂದಿತ್ತು. ಮಂತ್ರಾಲಯದಿಂದ ಕಾರು ಏರಿ ತೆರಳುವ ಮುನ್ನ ಜನರತ್ತ ಕೈ ಬೀಸಿದ್ದಾರೆ.

ಕಿಚ್ಚ ಸುದೀಪ್ ಇದೀಗ ಮ್ಯಾಕ್ಸ್ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿದ್ದಾರೆ. ಕೆಲವು ದಿನಗಳಿಂದ ಮ್ಯಾಕ್ಸ್ ಶೂಟಿಂಗ್ ಗಾಗಿ ಚೆನ್ನೈನಲ್ಲೇ ಬೀಡುಬಿಟ್ಟಿದ್ದಾರೆ. ನಿನ್ನೆ ಕರ್ನಾಟಕದಲ್ಲಿ ಮತದಾನವಾಗಿದ್ದರಿಂದ ಪತ್ನಿ ಸಮೇತರಾಗಿ ಬಂದು ಮತ ಚಲಾಯಿಸಿ ತೆರಳಿದ್ದರು. ಇಂದು ಕುಟುಂಬ ಸಮೇತರಾಗಿ ಟೆಂಪಲ್ ರನ್ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ