ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರ: ಕುಮಾರಸ್ವಾಮಿ ಪರ ಸುಮಲತಾ ಪರೋಕ್ಷ ವಾರ್!

Krishnaveni K

ಗುರುವಾರ, 18 ಏಪ್ರಿಲ್ 2024 (10:10 IST)
ಮಂಡ್ಯ: ಈ ಬಾರಿ ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ಕೈ ತಪ್ಪಿದರೂ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರಿಕೊಂಡಿದ್ದ ಸುಮಲತಾ ಅಂಬರೀಶ್ ಇದೀಗ ಪ್ರಚಾರ ಕಣದಿಂದ ದೂರವಿದ್ದಾರೆ. ಆದರೆ ಅವರ ದತ್ತುಪುತ್ರ ನಟ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ.

ಸುಮಲತಾ ಅಂಬರೀಶ್ ಇತ್ತೀಚೆಗೆ ಮಂಡ್ಯದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದರು. ಈ ವೇಳೆ ತಾವು ಬಿಜೆಪಿ ಸೇರುತ್ತಿರುವುದಾಗಿ ಘೋಷಣೆ ಮಾಡಿದ್ದರು. ಈ ಸಭೆಯಲ್ಲಿ ಸುಮಲತಾರನ್ನು ಅಮ್ಮ ಎಂದೇ ಕರೆಯುವ ನಟ ದರ್ಶನ್ ಕೂಡಾ ಭಾಗಿಯಾಗಿದ್ದರು. ಅಮ್ಮ ಎಲ್ಲಿ ಇರುತ್ತಾರೋ ನಾನು ಅಲ್ಲೇ ಇರುತ್ತೇನೆ ಎಂದಿದ್ದರು.

ಮಂಡ್ಯದಲ್ಲಿ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ಕಳೆದ ಚುನಾವಣೆಯಲ್ಲೇ ಮಾತಿನ ಚಕಮಕಿ ಜೋರಾಗಿತ್ತು. ಇಬ್ಬರ ನಡುವೆ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ. ಹಾಗಿದ್ದರೂ ಈ ಚುನಾವಣೆ ವೇಳೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಇತ್ತೀಚೆಗೆ ಸುಮಲತಾ ಬೆಂಬಲ ಕೋರಲು ಕುಮಾರಸ್ವಾಮಿ ಅವರ ಮನೆಗೇ ತೆರಳಿದ್ದರು. ಮೇಲ್ನೋಟಕ್ಕೆ ಇಬ್ಬರೂ ಪ್ಯಾಚ್‍ ಅಪ್ ಮಾಡಿಕೊಂಡಿದ್ದರು.

ಆದರೆ ಒಳಗೊಳಗೆ ಮಂಡ್ಯ ಟಿಕೆಟ್ ಕೈ ತಪ್ಪಿದ ಬೇಸರ ಸುಮಲತಾರನ್ನು ಕಾಡುತ್ತಿರಬಹುದು. ಇದೇ ಕಾರಣಕ್ಕೆ ಅವರು ಈಗ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿಲ್ಲ. ಬಿಜೆಪಿ ಹೈಕಮಾಂಡ್ ಹೇಳಿದರೆ ಪ್ರಚಾರಕ್ಕೆ ಸಿದ್ಧ ಎಂದಿದ್ದರು. ಆದರೆ ಈಗ ಪ್ರಚಾರದಿಂದ ದೂರವೇ ಉಳಿದಿದ್ದಾರೆ.

ಇನ್ನೊಂದೆಡೆ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸ್ಟಾರ್ ಚಂದ್ರು ಪರ ಸುಮಲತಾರನ್ನು ಅಮ್ಮ ಎಂದೇ ಕರೆಯುವ ನಟ ದರ್ಶನ್ ಪ್ರಚಾರ ನಡೆಸಲು ಮುಂದಾಗಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಹಾಗಿದ್ದರೆ ಸುಮಲತಾ ಪರೋಕ್ಷವಾಗಿ ದರ್ಶನ್ ಮೂಲಕ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆಯೇ ಎಂಬ ಅನುಮಾನವೂ ಮೂಡಿದೆ. ಆದರೆ ದರ್ಶನ್ ಈ ಮೊದಲೂ ಪಕ್ಷ ಬೇಧವಿಲ್ಲದೇ ತಮ್ಮ ಪರಿಚಯದ ವ್ಯಕ್ತಿಗಳಿಗಾಗಿ ಪ್ರಚಾರ ನಡೆಸಿದ್ದು ಇದೆ. ಇದೂ ಅದೇ ರೀತಿಯ ಪ್ರಚಾರವೇ ಇಲ್ಲ, ಇದರ ಹಿಂದೆ ಬೇರೆ ಲೆಕ್ಕಾಚಾರವಿದೆಯೇ ಎಂದು ಸ್ಪಷ್ಟವಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ