ಬಸ್ ಪ್ರಯಾಣಕ್ಕೆ ಈ ರೂಲ್ಸ್ ಪಾಲಿಸಲೇಬೇಕು

ಸೋಮವಾರ, 18 ಮೇ 2020 (19:04 IST)
ಕರ್ನಾಟಕ ರಾಜ್ಯದೊಳಗೆ ಕಂಟೈನ್ ಮೆಂಟ್ ಝೋನ್ ಹೊರತುಪಡಿಸಿ ಹಾಗೂ ಪ್ರತಿ ರವಿವಾರ ಸಂಪೂರ್ಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಷರತ್ತಿಗೊಳಪಟ್ಟು ಸಂಸ್ಥೆಯ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲು ಅನುಮತಿ ನೀಡಲಾಗಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಳ್ಳಾರಿ ಜಿಲ್ಲೆಗಳಿಂದ ಪ್ರತಿ ದಿನ ಬೆಳಿಗ್ಗೆ 07.00 ಗಂಟೆಯಿಂದ ಸಾಯಂಕಾಲ 07.00 ಗಂಟೆಯವರೆಗೆ  ಬಸ್‍ಗಳನ್ನು ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ನಿಟ್ಟಿನಲ್ಲಿ ಸಾರ್ವಜನಿಕ ಪ್ರಯಾಣಿಕರು ಪಾಲಿಸಬೇಕಾದ ರೂಲ್ಸ್ ಹೀಗಿವೆ…

1. ಮುಖಕ್ಕೆ ಮುಖ ಗವಸು ಧರಿಸಿದ ಪ್ರಯಾಣಿಕರಿಗೆ ಮಾತ್ರ ಬಸ್‍ನಲ್ಲಿ ಪ್ರವೇಶಿಸಲು ಅವಕಾಶವಿರುತ್ತದೆ. ಪ್ರಯಾಣಿಕರು ಮುಖಕ್ಕೆ ಮುಖ ಗವಸು ಧರಿಸದಿದ್ದರೆ ಬಸ್ ಒಳಗೆ ಪ್ರಯಾಣಕ್ಕೆ ಅನುಮತಿ ನೀಡಲಾಗುವುದಿಲ್ಲ.
2. ಬಸ್ ನಿಲ್ದಾಣಗಳಿಗೆ ಒಳ ಬರುವ ಪ್ರಯಾಣಿಕರಿಗೆ ಒಂದೇ ದ್ವಾರ ಗುರುತಿಸಿದ್ದು, ಅದರ ಮುಖಾಂತರವೇ ಪ್ರವೇಶ ಮಾಡುವುದು ಹಾಗೂ ಪ್ರವೇಶ ದ್ವಾರದಲ್ಲಿ ಒಳ ಬರುವಾಗ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು.
3. ಬಸ್ ನಿಲ್ದಾಣದೊಳಗೆ ಬರುವಾಗ ಹಾಗೂ ಬಸ್ ನಿಲ್ದಾಣದಲ್ಲಿ ಬಸ್‍ಗಳನ್ನು ಹತ್ತುವಾಗ ಹಾಗೂ ಇಳಿಯುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
4. ಬಸ್ ನಿಲ್ದಾಣದ ಆವರಣದಲ್ಲಿ ಹಾಗೂ ಬಸ್ಸಿನಲ್ಲಿ ಎಲ್ಲಿಂದರಲ್ಲಿ ಉಗುಳುವುದನ್ನು ನಿಷೇಧಿಸಿದೆ.
5. ಬಸ್ ನಿಲ್ದಾಣಗಳಲ್ಲಿ ಹಾಗೂ ಬಸ್ಸಿನಲ್ಲಿ ಪ್ರಯಾಣಿಕರು ತಂಬಾಕು, ಗುಟ್ಕಾ, ಧೂಮಪಾನವನ್ನು ನಿಷೇಧಿಸಿದೆ.
6. ಸಾಮಾಜಿಕ ಅಂತರ ಕಾಪಾಡಲು ಬಸ್ಸಿನಲ್ಲಿ ವಿಶೇಷವಾಗಿ ಗುರುತಿಸಿದ ಆಸನಗಳನ್ನು ಕಲ್ಪಿಸಲಾಗಿದ್ದು, ಪ್ರಯಾಣಿಕರು ಗುರುತಿಸಿದ ಆಸನದಲ್ಲಿ ಮಾತ್ರ ಕುಳಿತುಕೊಳ್ಳುವುದು.
7.ಬಸ್ಸಿನಲ್ಲಿ ಹತ್ತುವಾಗ ಸ್ಯಾನಿಟೈಜರ್ ಉಪಯೋಗಿಸಿ ಕೈಗಳನ್ನು ಶುಚಿಗೊಳಿಸಿಕೊಳ್ಳುವುದು.             
8. ಬೇಡಿಕೆ ಬಂದ ಸ್ಥಳಗಳಿಗೆ ಜನದಟ್ಟಣೆಗನುಗುಣವಾಗಿ ಬಸ್ ಕಾರ್ಯಾಚರಣೆಯನ್ನು ಮಾಡಲಾಗುವುದು
9. ಒಂದು ಬಸ್ಸಿನಲ್ಲಿ ಕೇವಲ 30 ಜನ ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅನುಮತಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ