ಪಾಕಿಸ್ತಾನಕ್ಕೆ ನುಗ್ಗಿ ಹೊಡಿತೀವಿ: ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

Krishnaveni K

ಶನಿವಾರ, 6 ಏಪ್ರಿಲ್ 2024 (09:23 IST)
Photo Courtesy: Twitter
ನವದೆಹಲಿ: ಭಾರತದ ಬಗ್ಗೆ ಬ್ರಿಟಿಷ್ ಪತ್ರಿಕೆಯೊಂದು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತದ ತಂಟೆಗೆ ಬಂದರೆ ಭಯೋತ್ಪಾದಕರನ್ನ ನುಗ್ಗಿ ಹೊಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ದಿ ಗಾರ್ಡಿಯನ್ ಪತ್ರಿಕೆ ಭಾರತ 2020 ರ ನಂತರ ಇಲ್ಲಿಯವರೆಗೆ ಭಯೋತ್ಪಾದಕರ ನೆಪದಲ್ಲಿ ಪಾಕಿಸ್ತಾನ 20 ನಾಗರಿಕರನ್ನು ಕೊಂದಿದೆ ಎಂದು ವರದಿ ಮಾಡಿತ್ತು. ಈ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜನಾಥ್ ಸಿಂಗ್, ಇದೆಲ್ಲಾ ಸುಳ್ಳು ಸುದ್ದಿಗಳು ಎಂದಿದ್ದಾರೆ.

‘ಪತ್ರಿಕೆಯಲ್ಲಿ ಬಂದ ವರದಿಗಳು ಸುಳ್ಳು ಮತ್ತು ಭಾರತ ವಿರೋಧಿ ಧೋರಣೆಯನ್ನು ಹೊಂದಿದೆ. ಇನ್ನೊಂದು ದೇಶದ ನಾಗರಿಕರನ್ನು ಕೊಲ್ಲುವುದು ನಮ್ಮ ವಿದೇಶಾಂತ್ ನೀತಿಯೇ ಅಲ್ಲ. ಆದರೆ ನೆರೆಯ ರಾಷ್ಟ್ರದ ಭಯೋತ್ಪಾದಕರು ನಮ್ಮಲ್ಲಿ ಭಯೋತ್ಪಾದನಾ ಕೃತ್ಯ ನಡೆಸಿದರೆ ಅದಕ್ಕೆ ತಕ್ಕ ಉತ್ತರ ಸಿಗುತ್ತದೆ. ಒಂದು ವೇಳೆ ಕಾರ್ಯಾಚರಣೆ ವೇಳೆ ಪಾಕಿಸ್ತಾನದತ್ತ ಓಡಿದರೆ ನುಗ್ಗಿ ಹೊಡೆಯುತ್ತೇವೆ’ ಎಂದಿದ್ದಾರೆ.

ಇನ್ನೂ ಮುಂದುವರಿದು, ‘ಭಾರತ ಯಾವತ್ತೂ ತಾನಾಗಿಯೇ ಇನ್ನೊಂದು ರಾಷ್ಟ್ರದ ಮೇಲೆ ದಾಳಿ ನಡೆಸಿಲ್ಲ. ನಮ್ಮ ಇತಿಹಾಸ ಗಮನಿಸಿದರೆ ಗೊತ್ತಾಗುತ್ತದೆ. ಆದರೆ ನಮ್ಮನ್ನು ಕೆಣಕಲು ಬಂದರೆ ಅವರನ್ನು ಸುಮ್ಮನೇ ಬಿಡುವ ಜಾಯಮಾನದವರಲ್ಲ’ ಎಂದು ರಾಜನಾಥ್ ಸಿಂಗ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ