ಪದ್ಮನಾಭನಗರದಲ್ಲಿ ನಾಳೆ 'ಅಭಯಾಕ್ಷರ - ಹಾಲುಹಬ್ಬ'

ಶುಕ್ರವಾರ, 14 ಜುಲೈ 2017 (19:20 IST)
ಗೋವು ಪ್ರೀತಿಯಿಂದ ಕೊಡುವ ಹಾಲನ್ನು ಕುಡಿದು ಸಂಭ್ರಮಿಸಿ, ಭಾರತೀಯ ಗೋವಂಶದ ಮಹತ್ವವನ್ನು ಸಾರುವ 'ಅಭಯಾಕ್ಷರ - ಹಾಲುಹಬ್ಬ' ಕಾರ್ಯಕ್ರಮವನ್ನು ಶ್ರೀರಾಮಚಂದ್ರಾಪುರಮಠದ ಕಾಮದುಘಾ ವಿಭಾಗದಿಂದ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸಲಾಗುತ್ತಿದ್ದು, ನಾಳೆ (15/07/2017)  ಪದ್ಮನಾಭನಗರದ ಅಟಲ್ ಬಿಹಾರಿ ಪಾಜಪೇಯಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3.00 ಯಿಂದ ನಡೆಯಲಿದೆ. 
 
ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದು, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ  ಪದ್ಮನಾಭನಗರ ಶಾಸಕರಾದ ಆರ್ ಅಶೋಕ್ ಉಪಸ್ಥಿತರಿರಲಿದ್ದಾರೆ. ಎ.ಪಿ.ಎಸ್ ಕಾಲಿಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಕೃಷ್ಣಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದು, ಆ ಭಾಗದ ಎಲ್ಲಾ ಕಾರ್ಪೊರೇಟರ್ ಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಪೂರಕವಾಗಿ ನಡೆಯುವ 'ಅಭಯಾಕ್ಷರ' ಅಭಿಯಾನಕ್ಕೆ ಈಗಾಗಲೆ ವಿವಿಧ ಕ್ಷೇತ್ರಗಳ ಗಣ್ಯರು ಸಹಿ ಮಾಡಿ ಬೆಂಬಲ ಸೂಚಿಸಿದ್ದು, ಸಭೆಯಲ್ಲಿ ಭಾಗವಹಿಸಿ ಗೋವಿನ ಕುರಿತಾದ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಲಿದ್ದಾರೆ.
 
ಹಾಲಿತ್ತ ಗೋಮಾತೆಗೆ ಕೃತಜ್ಞತೆ ಅರ್ಪಿಸುವ ಈ ಕಾರ್ಯಕ್ರಮದಲ್ಲಿ, ಗೋಪೂಜೆ, ಗೋಆರತಿ, ಗೋಗ್ರಾಸ ಸಮರ್ಪಣೆಯಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಗೋವಿನ ಮಹಿಮೆಯನ್ನು ಅನಾವರನಗೊಳಿಸುವ ಯಕ್ಷಗಾನ ಪ್ರದರ್ಶಿತವಾಗಲಿದೆ. ಗೋವಿನ ಹಾಲನ್ನು ಕರೆಯುವುದರ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲ್ಲಿದ್ದು, ಗೋಮಾಂಸ ಭಕ್ಷಣೆಯಿಂದ ಆಗುವ ಅನಾಹುತಗಳ ಕುರಿತು ವಿಡಿಯೋ ಪ್ರದರ್ಶನ ಇರಲಿದ್ದು, ದೇಶೀ ಗೋವಿನ ಹಾಲಿನಿಂದ ವಿವಿಧ ಖಾದ್ಯಗಳ ತಯಾರಿಕೆಯ ಪ್ರಾತ್ಯಕ್ಷಿಕೆ ಹಾಗೂ ಮಾರಾಟ ನಡೆಯಲಿದೆ. ಗವ್ಯವನ್ನು ಬಳಸಿ ತಯಾರಿಸಿದ ವಿವಿಧ ಸಿದ್ಧ ಗೃಹೋಪಯೋಗಿ ವಸ್ತುಗಳು ಹಾಗೂ ಔಷಧಗಳ ಮಾರಾಟ ಇರಲಿದೆ.
 
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಬನಶಂಕರಿ ಬಿಡಿಎ ಬಳಿಯಿಂದ 'ಅಭಯಾಕ್ಷರ ರಥಯಾತ್ರೆ' ನಡೆಯಲಿದ್ದು, ಕಾರ್ಯಕ್ರಮದ ಕೊನೆಯಲ್ಲಿ ಗೋಕಿಂಕರರಾಗಿ ಸೇವೆಸಲ್ಲಿಸಲು ಇಚ್ಚಿಸುವ ಗೋಪ್ರೇಮಿಗಳಿಗೆ, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು 'ಗೋದೀಕ್ಷೆ' ನೀಡಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ