ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಬುಧವಾರ, 9 ಏಪ್ರಿಲ್ 2014 (20:11 IST)
PR
PR
ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಮಳೆಯಿಂದ ಜನತೆ ಖುಷಿಯಾಗಿದ್ದಾರೆ. ಸಂಜೆಯ ಹೊತ್ತಿಗೆ ಬೆಂಗಳೂರಿನ ಅನೇಕ ಕಡೆ ಗುಡುಗಿನಿಂದ ಕೂಡಿದ ಬಿರುಸಾದ ಮಳೆ ತಾತ್ಕಾಲಿಕ ಶಮನ ನೀಡಿದೆ. ಕಚೇರಿಯಿಂದ ಮನೆಗೆ ಹೋಗುವ ಜನರಿಗೆ ಅಡಚಣೆಯಾದ್ರೂ ಕೂಡ ಜನರು ಬೇಸರಗೊಳ್ಳದೇ ಅಪರೂಪದ ಮಳೆರಾಯನಿಗೆ ಸ್ವಾಗತ ನೀಡಿದ್ದಾರೆ. ಕೆಲವು ಭಾಗದಲ್ಲಿ ಒಂದು ಗಂಟೆ ಕಾಲ ಮಳೆ ಸುರಿದಿದೆ. ಸುಮಾರು ಎರಡು ವಾರಗಳಿಂದ ಬಿಸಿಲಿನ ಬೇಗೆಯಿಂದ ಜನರು ತತ್ತರಿಸಿದ್ದರು.

ಈ ಮಳೆಯಿಂದ ತಾಪಮಾನ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಮಲ್ಲೇಶ್ವರಂ, ರಾಜಾಜಿನಗರದಲ್ಲಿ ಹೆಚ್ಚಿನ ಮಳೆ ಬಿದ್ದಿದ್ದು, ಕೆಲವು ಕಡೆ ತುಂತುರು ಮಳೆಯಾಗಿದೆ. ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ನಾಳೆ ಮತ್ತು ನಾಡಿದ್ದು ತುಂತುರು ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ವೆಬ್ದುನಿಯಾವನ್ನು ಓದಿ