ಬೀಜಿಂಗ್ ಒಲಿಂಪಿಕ್ ಗೇಮ್ಸ್ನಲ್ಲಿ ಭಾರತದ ಕುಸ್ತಿಪಟು ವಿಜೇಂದರ್ ಕುಮಾರ್ ಅವರು ಫೈನಲ್ ತಲುಪುವ ಅವಕಾಶವನ್ನು ಕಳೆದುಕೊಂಡಿದ್ದರು ಕೂಡ,ಅತ್ಯಂತ ಚಾಕಚಕ್ಯತೆ ಯಿಂದ ಸೆಮಿಫೈನಲ್ವರೆಗೆ ಸೆಣಸಿ ಕಂಚಿನ ಪದಕ ತಂದುಕೊಟ್ಟ ವಿಜೇಂದರ್ ಸಾಧನೆ ಶ್ಲಾಘನೀಯವಾದದ್ದು ಎಂದು ಕ್ರೀಡಾಸಚಿವ ಎಂ.ಎಸ್.ಗಿಲ್ ಅವರು ಶಹಬ್ಬಾಸ್ ಗಿರಿ ನೀಡಿದ್ದಾರೆ.
ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟ ಮುಗಿದ ಬಳಿಕ ಆಗೋಸ್ಟ್ 25ಕ್ಕೆ ವಿಜೇಂದರ್ ತಾಯ್ನಾಡಿಗೆ ಹಿಂತಿರುಗುತ್ತಿರುವುದನ್ನೇ ಎದುರು ನೋಡುತ್ತಿರುವುದಾಗಿ ಅವರು ಹೇಳಿದರು.
ವಿಜೇಂದರ್ ಫೈನಲ್ ತಲುಪಲಾಗದ್ದಕ್ಕೆ ಬೇಸರ ಇದೆ,ಆದರೆ ಎದುರಾಳಿ ವಿರುದ್ಧ ವಿಜೇಂದರ್ ಅವರು ಶಾಂತ ಮನಸ್ಥಿತಿಯಿಂದ, ಚಾಕಚಕ್ಯತೆಯಿಂದ ಸಣಸಾಡಿರುವುದಕ್ಕೆ ಅಭಿನಂದಿಸುತ್ತಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಒಲಿಂಪಿಕ್ ಕ್ರೀಡಾಕೂಟದಲ್ಲಿ ಶುಕ್ರವಾರ ನಡೆದ ಬಾಕ್ಸಿಂಗ್ ಸೆಮಿಫೈನಲ್ ಹಣಾಹಣಿಯಲ್ಲಿ ವಿಜೇಂದರ್ ಕುಮಾರ್ ಅವರು ಕ್ಯೂಬಾದ ಎಮೋಲಿ ಕೊರ್ರೆಯಾ ವಿರುದ್ಧ ಪರಾಜಯ ಗೊಳ್ಳುವ ಮೂಲಕ ಫೈನಲ್ ಪ್ರವೇಶದ ಕನಸು ಭಗ್ನಗೊಂಡಿತ್ತು. ಆದರೆ ವಿಜೇಂದರ್ ಅವರು ಕಂಚಿನ ಪದಕದೊಂದಿಗೆ ತಾಯ್ನಾಡಿಗೆ ಮರಳುತ್ತಿರುವುದು ಕ್ರೀಡಾಭಿಮಾನಿಗಳಲ್ಲಿ ಸಂತೋಷದ ಹೊನಲು ತರಿಸಿದೆ.