ಲೋಕಸಭೆಗೆ ಕಾಂಗ್ರೆಸ್ ಟಿಕೆಟ್ ಪಡೆದ ಮಾರನೇ ದಿನವೇ ಬಿಜೆಪಿ ಸೇರಿದ ಅಭ್ಯರ್ಥಿ

ಶುಕ್ರವಾರ, 14 ಮಾರ್ಚ್ 2014 (17:15 IST)
PR
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಪಡೆದ ಮಾರನೇ ದಿನವೇ ಬಿಜೆಪಿ ಸೇರುವುದರ ಮೂಲಕ ವ್ಯಕ್ತಿಯೊಬ್ಬರು ಕಾಂಗ್ರೆಸ್ ಗೆ ಇರಿಸು ಮುರಿಸು ಉಂಟು ಮಾಡಿದ್ದಾರೆ.

ನಿವೃತ್ತ ಆಎಸ್ ಅಧಿಕಾರಿಯಾಗಿರುವ ಡಾ. ಭಗೀರಥ ಪ್ರಸಾದ ಶನಿವಾರ ಮಧ್ಯಪ್ರದೇಶದ ಭಿಂದ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶನಿವಾರ ಘೋಷಿಸಲ್ಪಟ್ಟಿದ್ದರು. ಕಾಂಗ್ರೆಸ್ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿರುವ 194 ನಾಮಾಂಕಿತರ ಪಟ್ಟಿಯಲ್ಲಿ ಇವರು ಸಹ ಸೇರಿದ್ದಾರೆ. 2009 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಯಶಸ್ವಿಯಾಗಿರಲಿಲ್ಲ.

"ಕಾಂಗ್ರೆಸ್ ನಲ್ಲಿ ಉಳಿದ ನಂತರ ನಾನು ಇಲ್ಲಿ ನಮಗೆ ಬೇಕಾದ ರೀತಿಯಲ್ಲಿ ಜನಸೇವೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡಿದ್ದೇನೆ. ಪಕ್ಷದಲ್ಲಿ ಬಹಳಷ್ಟು ಭಿನ್ನಾಭಿಪ್ರಾಯಗಳಿವೆ " ಎಂದು ತಮ್ಮ ಹಠಾತ್ ನಿರ್ಧಾರವನ್ನು ಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಹೊಗಳಿರುವ ಅವರು, ಜನರ ಕಲ್ಯಾಣ ಬಿಜೆಪಿ ಪಕ್ಷದ ಮೂಲಕ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ಈ ಪಕ್ಷಾಂತರದಿಂದ ಕಸಿವಿಸಿಗೊಂಡಿರುವ ಕಾಂಗ್ರೆಸ್ ಪ್ರಸಾದ್ "ವಂಚಕ" ಎಂದು ಜರಿದಿದೆ.

"ಬಿಜೆಪಿ ಜತೆ ದೊಡ್ಡ ಮೊತ್ತದ ಹಣದ ಒಪ್ಪಂದವಾಗಿದೆ. ಪ್ರಸಾದ್ ಬಿಜೆಪಿಯಿಂದ ಹಣ ಪಡೆದಿದ್ದಾರೆ" ಎಂದು ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಅರುಣ್ ಯಾದವ್ ಆರೋಪಿಸಿದ್ದಾರೆ".

ವೆಬ್ದುನಿಯಾವನ್ನು ಓದಿ