ಮುಗಿಯಿತು ಚುನಾವಣೆ ಸಮರ: ಮತಎಣಿಕೆಯತ್ತ ಎಲ್ಲರ ಚಿತ್ತ

ಬುಧವಾರ, 21 ಆಗಸ್ಟ್ 2013 (20:31 IST)
PR
PR
ಬೆಂಗಳೂರು: ಕಳೆದ 20 ದಿನಗಳಿಂದ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಲೋಕಸಭೆ ಉಪಚುನಾವಣೆಗೆ ಮತದಾರ ತೆರೆಎಳೆದಿದ್ದಾನೆ. ಆದರೆ ಮತದಾನದ ಅಂಕಿ, ಅಂಶಗಳನ್ನು ಗಮನಿಸಿದರೆ ನಿರೀಕ್ಷೆ ಮಾಡಿದ ರೀತಿಯಲ್ಲಿ ಮತದಾನ ನಡೆದಿಲ್ಲ ಎನ್ನುವುದನ್ನು ತೋರಿಸುತ್ತಿದೆ. ಬೆಳಿಗ್ಗೆಯಿಂದ ಮತದಾನ ನೀರಸವಾಗಿದ್ದು, ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಒಟ್ಟಾರೆಯಾಗಿ ಶೇ. 52 ಮತದಾನವಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇ. 50.93 ಮತದಾನವಾಗಿದೆ. ಕುಣಿಗಲ್‌ನಲ್ಲಿ ಶೇ. 63.39, ರಾಜರಾಜೇಶ್ವರಿ ನಗರದಲ್ಲಿ ಶೇ. 32.05, ಆನೇಕಲ್ ಶೇ. 40, ಮಾಗಡಿಯಲ್ಲಿ ಶೇ. 60.05, ರಾಮನಗರದಲ್ಲಿ ಶೇ. 66 , ಕನಕಪುರ 63, ಚನ್ನಪಟ್ಟಣ ಶೇ. 56 ಮತದಾನವಾಗಿದೆ. ಮತದಾನ ಭರದಿಂದ ನಡೆಯಬಹುದೆಂಬ ವಿವಿಧ ಪಕ್ಷಗಳ ನಾಯಕರ ಲೆಕ್ಕಾಚಾರ ಠುಸ್ ಆಗಿದೆ.

ಮತದಾನ ನೀರಸವಾಗಿ ನಡೆದ ಬಗ್ಗೆ ಒಬ್ಬೊಬ್ಬ ನಾಯಕರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಲೋಕಸಭೆ ಉಪಚುನಾವಣೆಯ ಅವಧಿ ಆರೇಳು ತಿಂಗಳು. ಅಷ್ಟರಲ್ಲಿ ರಾಷ್ಟ್ರೀಯ ಚುನಾವಣೆ ಎದುರಾಗುತ್ತದೆ. ಜಲಾಶಯಗಳು ಭರ್ತಿಯಾಗಿದ್ದು, ರೈತರು ಬಿತ್ತನೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಶೇಕಡಾವಾರು ಮತದಾನ ಕುಸಿದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

PR
PR
ಸಚಿವ ಅಂಬರೀಶ್ ಮತದಾನ ನೀರಸವಾಗಿ ನಡೆದ ಬಗ್ಗೆ ಪ್ರತಿಕ್ರಿಯಿಸುತ್ತಾ, ಜನರಿಗೆ ಕೂಡ ಪದೇ ಪದೇ ನಡೆಯುವ ಚುನಾವಣೆಗಳಿಂದ ಬೇಸರವಾಗಿದೆ. ಅವರೆಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಚುನಾವಣೆಗೆ ಬರಬೇಕಲ್ಲ. ಅಲ್ಲದೇ ಏಳೆಂಟು ತಿಂಗಳಿಗೋಸ್ಕರ ಈ ಚುನಾವಣೆ ನಡೆಯುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ಮತದಾರರಿಗೆ ಚುನಾವಣೆಯಲ್ಲಿ ಆಸಕ್ತಿಯಿಲ್ಲದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಶತಾಯಗತಾಯ ಗೆಲ್ಲಲೇಬೇಕೆಂದು ಎರಡೂ ಪಕ್ಷಗಳ ಮುಖಂಡರು ಜಿದ್ದಾಜಿದ್ದಿ ಹೋರಾಟಕ್ಕೆ ಇಳಿದಿದ್ದರು. ಈ ಹೋರಾಟದ ಭರದಲ್ಲಿ ಉಭಯ ಪಕ್ಷಗಳ ಮುಖಂಡರ ನಡುವೆ ವಾಕ್ಸಮರ ಜೋರಾಗಿಯೇ ಸಾಗಿತ್ತು. ಲೋಕಸಭೆ ಉಪಚುನಾವಣೆಯ 9 ಅಭ್ಯರ್ಥಿಗಳು, ಮಂಡ್ಯ ಗ್ರಾಮಾಂತರದ 13 ಅಭ್ಯರ್ಥಿಗಳ ಭವಿಷ್ಯ ಈ ಮತಯಂತ್ರದಲ್ಲಿ ಭದ್ರವಾಗಿದ್ದು, ಇದೀಗ ಶನಿವಾರ ನಡೆಯುವ ಮತಎಣಿಕೆಯತ್ತ ಎಲ್ಲರ ಚಿತ್ತ ಹರಿದಿದೆ.

ವೆಬ್ದುನಿಯಾವನ್ನು ಓದಿ