ಆಡ್ವಾಣಿಗೆ ಭೋಪಾಲ್ ಟಿಕೆಟ್ ತಪ್ಪಿಸಿದ ಮೋದಿ, ಇದೀಗ ಗುಜರಾತ್‌ನಲ್ಲೇ ಮೋದಿ ವಿರುದ್ಧ ಅಪಸ್ವರ

ಶುಕ್ರವಾರ, 21 ಮಾರ್ಚ್ 2014 (19:24 IST)
PTI
ಬಿಜೆಪಿ ಪ್ರದಾನಿ ಅಭ್ಯರ್ಥಿ ನರೇಂದ್ರ ಮೋದಿ ತನ್ನ ವಿರೋಧಿಗಳಿಗೆ ಟಿಕೆಟ್ ನಿರಾಕರಿಸಿ ಮುಲಾಜಿಲ್ಲದೇ ಬಗ್ಗುಬಡಿಯುತ್ತಿದ್ದಾರೆ ಎಂದು ಗುಜರಾತ್ ಬಿಜೆಪಿಯಲ್ಲಿಯೇ ಭಿನ್ನಮತ ಹೊಗೆಯಾಡುತ್ತಿದೆ.

ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿಯವರಿಗೆ ಭೋಪಾಲ್‌ನಿಂದ ಟಿಕೆಟ್ ವಂಚಿಸಿ ಗಾಂಧಿನಗರಕ್ಕೆ ಸೀಮಿತಗೊಳಿಸಿ ತಮ್ಮ ಪ್ರಭಾವ ಮೆರೆದಿದ್ದ ಮೋದಿ, ಇದೀಗ ಭಾವನಗರ್ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿದ್ದ ರಾಜೇಂದ್ರ ಸಿನ್ಹಾ ರಾಣಾ ಅವರಿಗೆ ಕೆಲ ಕ್ಷುಲ್ಲಕ ಕಾರಣಗಳಿಂದಾಗಿ ಟಿಕೆಟ್ ನಿರಾಕರಿಸಿ ಪ್ರಾಬಲ್ಯವನ್ನು ಮೆರೆದಿದ್ದಾರೆ.

ಹಿರಿಯ ನಾಯಕ ಆಡ್ವಾಣಿಯವರಿಗೆ ಆತ್ಮಿಯರಾಗಿದ್ದಾರೆ ಎನ್ನುವ ಒಂದೇ ಒಂದು ಕಾರಣಕ್ಕೆ ಅಹ್ಮದಾಬಾದ್‌ನಿಂದ ಏಳು ಬಾರಿ ಸಂಸದರಾಗಿದ್ದ ಹರೀನ್ ಪಾಠಕ್ ಅವರಿಗೆ ಕೂಡಾ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಟಿಕೆಟ್ ವಂಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಪ್ರಕಟಿಸಿದ ಗುಜರಾತ್ ರಾಜ್ಯದ ಒಟ್ಟು 26 ಕ್ಷೇತ್ರಗಳ 21 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ್ದು, ಅದರಲ್ಲಿ ರಾಣಾ ಅವರಿಗೆ ಟಿಕೆಟ್ ಕೈ ತಪ್ಪಿದೆ.

ಕಳೆದ ಎಂಟು ವರ್ಷಗಳಿಂದ ಆರೆಸ್ಸೆಸ್ ಪ್ರಚಾರಕರಾದ ಸಂಜಯ್ ಜೋಷಿ ಅವರ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದ ನೆಪವೊಡ್ಡಿ ರಾಣಾ ಅವರಿಗೆ ಮೋದಿ ಟಿಕೆಟ್ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಯಾವದೇ ತಪ್ಪು ಮಾಡದ ನನಗೆ ಲೋಕಸಭೆ ಟಿಕೆಟ್ ನಿರಾಕರಿಸಲಾಗಿದೆ. ಆದರೆ, ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಇದೊಂದು ಸೇಡಿನ ಕೃತ್ಯವಾಗಿದೆ ಎಂದು ಬಿಜೆಪಿ ಮುಖಂಡ ರಾಜೇಂದ್ರ ಸಿನ್ಹಾ ರಾಣಾ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ