ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಜೆಡಿಎಸ್‌ ತೆಕ್ಕೆಗೆ?

ಶುಕ್ರವಾರ, 21 ಮಾರ್ಚ್ 2014 (19:17 IST)
PR
ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವ ಸಂದರ್ಭದಲ್ಲಿ ಅವರಿಗೆ ಆಪ್ತರಾಗಿರುವ ಸಿ.ಎಂ. ಇಬ್ರಾಹಿಂ ಅವರಿಗೆ ಯಾವುದೇ ಅಧಿಕಾರ ಸಿಗಲಿಲ್ಲ. ಇದಕ್ಕೆ ಮೂಲ ಕಾಂಗ್ರೆಸ್ಸಿಗರ ಅಡ್ಡಗಾಲೇ ಕಾರಣ ಎಂಬುದು ಇಬ್ರಾಹಿಂಗೆ ಮನವರಿಕೆಯಾಗಿದೆ. ಆದ್ದರಿಂದ ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್ ಬಾಗಿಲು ತೆರಿದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮುನಿಸಿಕೊಂಡಿರುವ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಿ.ಎಂ. ಇಬ್ರಾಹಿಂ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತ ನಾಯಕರನ್ನು ಸೆಳೆಯುವಲ್ಲಿ ಈಗಾಗಲೇ ಪ್ರಥಮ ಹೆಜ್ಜೆಯಲ್ಲಿ ಸಫಲವಾಗಿರುವ ಜೆಡಿಎಸ್, ಮಾಜಿ ಸಂಸದರಾದ ಜಾಫರ್ ಷರೀಫ್, ಎಚ್.ಟಿ. ಸಾಂಗ್ಲಿಯಾನರನ್ನು ಬಹುತೇಕ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಂತಿಮ ಸೇರ್ಪಡೆ ಕಾರ್ಯ ಮಾತ್ರ ಬಾಕಿ ಉಳಿದಿದೆ. ಈ ನಡುವೆ ಸಿ.ಎಂ. ಇಬ್ರಾಹಿಂ ಹಾಗೂ ದೇವೇಗೌಡರ ಭೇಟಿ ಕುತೂಹಲ ಮೂಡಿಸಿದೆ.

ದೇವೇಗೌಡರು ಪ್ರಧಾನಿಯಾಗಿದ್ದಾಗ ಸಚಿವರಾಗಿದ್ದ ಸಿ.ಎಂ. ಇಬ್ರಾಹಿಂ ಅವರು ಗೌಡರಿಗೆ ತೀರಾ ಆತ್ಮೀಯರಾಗಿದ್ದರು. ಜನತಾದಳ ಇಬ್ಭಾಗದಲ್ಲೂ ದೇವೇಗೌಡರೊಂದಿಗೇ ಗುರುತಿಸಿಕೊಂಡಿದ್ದರು. ಆದರೆ ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದಾಗ ಅವರೊಂದಿಗೆ ಸಿ.ಎಂ. ಇಬ್ರಾಹಿಂ ಹೆಜ್ಜೆ ಹಾಕಿದ್ದರು.

ಫಲಿಸದ ಪ್ರಯತ್ನ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಬಳಸಿಕೊಂಡೇ ಭದ್ರಾವತಿಯಲ್ಲಿ ಟಿಕೆಟ್ ಪಡೆದುಕೊಂಡಿದ್ದರು. ಆದರೆ, ಅಲ್ಲಿ ಸೋಲು ಅನುಭವಿಸಿದರು. ಹೀಗಾಗಿ, ರಾಜ್ಯದ ಸಚಿವರಾಗುವ ಅವಕಾಶದಿಂದ ವಂಚಿತರಾದರು. ಇದಾದಮೇಲೂ ವಿಧಾನಪರಿಷತ್‌ಗೆ ನಾಮ ನಿರ್ದೇಶಿತ ಸದಸ್ಯರಾಗಬೇಕೆಂದು ಸಾಕಷ್ಟು ಪ್ರಯತ್ನಪಟ್ಟರು. ಅಲ್ಲದೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆ ಮೇಲೂ ಕಣ್ಣಿಟ್ಟಿದ್ದರು. ಅಷ್ಟೇ ಅಲ್ಲ, ದೆಹಲಿ ಪ್ರತಿನಿಧಿಯಾಗಲೂ ಬಯಸಿದ್ದರು.

ಆದರೆ, ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಹೆಚ್ಚಿನ ಆಸಕ್ತಿ ತೋರಿರಲಿಲ್ಲ. ಹೀಗಾಗಿ ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯ ಅವರ ಜತೆಗೂಡಿದ್ದ ಸಿ.ಎಂ. ಇಬ್ರಾಹಿಂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕಳೆದ ಕೆಲವು ತಿಂಗಳಿಂದ ಸಾಕಷ್ಟು ದೂರವೇ ಉಳಿದಿದ್ದರು. ಲೋಕಸಭೆ ಚುನಾವಣೆ ಘೋಷಣೆಗೆ ಮುನ್ನ ಕೆಲ ದಿನಗಳಲ್ಲಿ ಯೋಜನಾ ಆಯೋಗದ ಅಧ್ಯಕ್ಷ ಸ್ಥಾನ ನೀಡುವುದಾಗಿಯೂ ಭರವಸೆ ಬಂದಿತ್ತು. ಆದರೆ ಅದೂ ಕಾರ್ಯಗತವಾಗಿಲ್ಲ.

ವೆಬ್ದುನಿಯಾವನ್ನು ಓದಿ