ನಮೋ ಸ್ತುತಿಯನ್ನು ಮನುಷ್ಯರಿಗೆ ಬಳಸುವುದು ದೇವರನ್ನು ಅಪಮಾನಿಸಿದಂತೆ: ಜಸ್ವಂತ್ ಸಿಂಗ್

ಮಂಗಳವಾರ, 25 ಮಾರ್ಚ್ 2014 (19:44 IST)
ಬರ್ಮಾರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ಬಿಜೆಪಿಯ ಮಾಜಿ ನಾಯಕ ಜಸ್ವಂತ್ ಸಿಂಗ್ ಇಂದು ನಾಮಪತ್ರ ಸಲ್ಲಿಸಿದರು.
PTI
ಆ ಸಂದರ್ಭದಲ್ಲಿ ಮಾತನಾಡಿದ 76 ವರ್ಷ ವಯಸ್ಸಿನ ಸಿಂಗ್ "ನಮೋ ದೇವರಿಗಾಗಿ ಹೇಳಲ್ಪಡುವ ಭಜನೆ. ಮನುಷ್ಯರಿಗಾಗಿ ಬಳಸುವುದಲ್ಲ. ನಮೋ ಸ್ತುತಿಯನ್ನು ಬಳಸಿ ಮನುಷ್ಯರನ್ನು ದೇವರೆಂದು ಬಿಂಬಿಸುವುದು ದೇವರನ್ನು ಅಪಮಾನಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

"ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಎರಡನೇ ಬಾರಿಗೆ ಫೋನ್ ಮೂಲಕ ನನ್ನನ್ನು ಪಕ್ಷದಿಂದ ಹೊರಹಾಕಿದ್ದಾರೆ. ಆದರೆ ಬಿಜೆಪಿ ಇನ್ನೂ ಅದನ್ನು ದೃಢೀಕರಿಸಿಲ್ಲ".

"ಈ ಹಿಂದೆ ನಾನು ನನ್ನ ಪುಸ್ತಕದಲ್ಲಿ ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳಿದ್ದಕ್ಕಾಗಿ 2009 ರಲ್ಲಿ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಆದರೆ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಒತ್ತಾಯದ ಮೇರೆಗೆ 10 ತಿಂಗಳ ನಂತರ ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು".

"ಮೊದಲ ಬಾರಿ ಪಕ್ಷದಿಂದ ಹೊರಹಾಕಿದ ನಂತರ ನಾನು ಬಿಜೆಪಿಗೆ ಮರಳ ಬಾರದಿತ್ತು" ಎಂದು ಜಸ್ವಂತ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ