ಸಹರಾಣಾಪುರದಲ್ಲಿ ಮೋದಿ ಅಲೆ ಇಲ್ಲ, ನಾನು ಗೆಲ್ಲುತ್ತೇನೆ :ಇಮ್ರಾನ್ ಮಸೂದ್

ಗುರುವಾರ, 10 ಏಪ್ರಿಲ್ 2014 (16:11 IST)
ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಯನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಇತ್ತೀಚಿಗೆ ಬಂಧಿಸಲ್ಪಟ್ಟಿದ್ದ ಸಹರಾಣಾಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ, ಇಮ್ರಾನ್ ಮಸೂದ್ ತನ್ನ ಗೆಲುವಿನ ಬಗ್ಗೆ ತನಗೆ ವಿಶ್ವಾಸವಿದೆ. ತಮ್ಮ ಕ್ಷೇತ್ರದಲ್ಲಿ ಮೋದಿ ಅಲೆ ಇಲ್ಲ ಎಂದು ಹೇಳಿದ್ದಾರೆ.
PTI

ಸುದ್ದಿಗಾರರೊಂದಿಗೆ ಮಾತನಾಡಿದ ವಿವಾದಾತ್ಮಕ ಕಾಂಗ್ರೆಸ್ ಶಾಸಕ, "ಸಹರಾಣಾಪುರದಲ್ಲಿ ಮೋದಿ ಅಲೆ ಕಿಂಚಿತ್ ಕೂಡ ಇಲ್ಲ. ನಾನು ಇಲ್ಲಿ ಜಯಗಳಿಸುತ್ತೇನೆ " ಎಂದರು.

"ಸೇಡಿಗಾಗಿ ಮತ " ಎಂಬ ಹೇಳಿಕೆಯನ್ನು ನೀಡಿ ಸುದ್ದಿ ಮಾಡಿದ್ದ ಮೋದಿ ಆಪ್ತ ಸಹಾಯಕ ಅಮಿತ್ ಶಾ, ಬಂಧನವನ್ನು ಮುಂದೂಡುತ್ತಿರುವ ಅಧಿಕಾರಿಗಳ ಮೇಲೂ ಕಾಂಗ್ರೆಸ್ ಶಾಸಕ ಕಿಡಿಕಾರಿದ್ದಾರೆ.

ಅಮಿತ್ ಶಾ ಅವರನ್ನು ತಕ್ಷಣ ಬಂಧಿಸುವಂತೆ ಕೋರಿರುವ ಮಸೂದ್, "ದ್ವಿಮುಖ ನೀತಿ ಏಕೆ? ನಿಸ್ಸಂಶಯವಾಗಿ ಅಮಿತ್ ಶಾರವರನ್ನು ಬಂಧಿಸಬೇಕು " ಎಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಸಾಮುದಾಯಿಕ ಗಲಭೆ ಸಂದರ್ಭದಲ್ಲಿ ನಿಮ್ಮನ್ನು ಅಪಮಾನ ಮಾಡಿದವರ ವಿರುದ್ಧ ಮತ ಚಲಾಯಿಸಿ ಎಂದು ಮುಜಾಫರ್‌ನಗರದ ಮತದಾರರಲ್ಲಿ ಕೇಳಿಕೊಂಡಿದ್ದ ಶಾ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಸೂದ್ ಸಹ ಮೋದಿಯನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂಬ ವೈರತ್ವದ ಹೇಳಿಕೆ ನೀಡಿದ ಕಾರಣಕ್ಕಾಗಿ ಬಂಧಿಸಲ್ಪಟ್ಟಿದ್ದರು.

ವೆಬ್ದುನಿಯಾವನ್ನು ಓದಿ