ಸಿದ್ದರಾಮಯ್ಯನವರ ಕೀಳು ಮಾತುಗಳಿಗೆ ಪ್ರತಿಕ್ರಿಯಿಸುವುದಿಲ್ಲ: ಗೌಡರ ಗುಡುಗು

ಶನಿವಾರ, 29 ಮಾರ್ಚ್ 2014 (16:11 IST)
PTI
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಅಭ್ಯರ್ಥಿಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರ ಈ ಕೀಳು ಮಾತುಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳು ಹಾಗೂ ಜೆಡಿಎಸ್ ಶಕ್ತಿ ಏನು ಎಂಬುದನ್ನು ತೋರಿಸುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಬಳ್ಳಾರಿ ಗಣಿಗಳಿಗಿಂತ ಹೆಚ್ಚಿನ ಮಟ್ಟದ ಭ್ರಷ್ಟಾಚಾರ ಮಾಡಿರುವವರನ್ನು ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಬಳ್ಳಾರಿ ಗಣಿಗಿಂತ ಮೂರು ಪಟ್ಟು ಹೆಚ್ಚಿನ ಹಗರಣ ಇವರು ಮಾಡಿದ್ದಾರೆ. ಅವರ ಬೆದರಿಕೆಗೆ ದೇವೇಗೌಡ, ಕುಮಾಸ್ವಾಮಿ ಜಗ್ಗಲ್ಲ. ಈ ಹಗರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು. ಆದರೆ, ಸಿಬಿಐ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವವರೆಗೂ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ ಇಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.

ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರ ನೈಜ ಬಣ್ಣವನ್ನು ರಾಮನಗರ ಕ್ಷೇತ್ರದ ಜನರ ಮುಂದಿಡಲಿದ್ದೇನೆ. ರಾಮನಗರ ನನಗೆ ರಾಜಕೀಯವಾಗಿ ಪುನರ್ಜನ್ಮ ನೀಡಿ ಕ್ಷೇತ್ರ. ಆಕ್ಷೇತ್ರಕ್ಕೆ ಹೋಗಲು ನನಗೆ ಹಿಂಜರಿಕೆ ಅಥವಾ ಹೆದರಿಕೆ ಇಲ್ಲ. ಎಲ್ಲವನ್ನೂ ಜನರ ಮುಂದೆ ಹೇಳಿಕೊಳ್ಳುತ್ತೇನೆ ಎಂದರು.

ಕೊಪ್ಪಳ ಕ್ಷೇತ್ರದಲ್ಲಿ ಕೆಲವು ಗೊಂದಲಗಳಿಂದ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿಲ್ಲ. ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬ ಬಗ್ಗೆ ಶಾಸಕ ಜಮೀರ್ ಅಹಮದ್ ಅಲ್ಲಿಗೆ ಭೇಟಿ ನೀಡಿ ನಿರ್ಧರಿಸಲಿದ್ದಾರೆ. ಇಕ್ಬಾಲ್ ಅನ್ಸಾರಿ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮಂಗಳೂರಿನಲ್ಲಿ ಎಸ್‌ಡಿಪಿಐನೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಇನ್ನು 26 ಕ್ಷೇತ್ರಗಳಲ್ಲೂ ಸಮರ್ಥ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗಿದೆ ಎಂದು ದೇವೇಗೌಡ ಸಮರ್ಥಿಸಿಕೊಂಡರು.

ಯುಗಾದಿ ಹಬ್ಬದ ನಂತರ ನಾನು ರಾಜ್ಯಾದ್ಯಂತ ಪ್ರಚಾರ ಮಾಡುತ್ತೇನೆ. ಕುಮಾರಸ್ವಾಮಿ ಹಾಗೂ ಜಮೀರ್ ಅಹಮದ್ ಕೂಡ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ