ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿ: ಮುಸ್ಲಿಂ ಮೌಲ್ವಿಗಳ ಒತ್ತಾಯ

ಮಂಗಳವಾರ, 18 ಮಾರ್ಚ್ 2014 (16:38 IST)
PTI
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿ ಎಂದು ಮುಸ್ಲಿಂ ಸಮುದಾಯದ ಮೌಲ್ವಿಗಳು ಆಗ್ರಹಿಸಿದ್ದಾರೆ.

ಕೋಲ್ಕತಾದ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಇಮಾಮ್ ಬರ್ಕಾತಿ ಮಾತನಾಡಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಬಳಸುತ್ತಿರುವ ಕಠೋರ ಶಬ್ದಗಳು ಸೂಕ್ತವಾಗಿವೆ.ಮಮತಾ ಬ್ಯಾನರ್ಜಿ ಕೂಡಾ ಮೋದಿ ವಿರುದ್ಧ ವಾಗ್ದಾಳಿ ನಡೆಸಬೇಕು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿಯಾಗಬೇಕು ಎನ್ನುವುದು ನಮ್ಮೆಲ್ಲರ ಬಯಕೆಯಾಗಿದೆ. ಒಂದು ವೇಳೆ ಆಕೆ ಪ್ರಧಾನಿಯಾಗದಿದ್ದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಇಮಾಮ್ ಬರ್ಕಾತಿ ಸಲಹೆ ನೀಡಿದ್ದಾರೆ.

ಬಿಜೆಪಿ ಪಕ್ಷ ವಿಷಕಾರಿಯಾಗಿದ್ದು ದೇಶಕ್ಕೆ ಅಪಾಯಕಾರಿಯಾಗಿದೆ ಎನ್ನುವ ರಾಹುಲ್ ಹೇಳಿಕೆ ಸರಿಯಾಗಿದೆ. ಮಮತಾ ಕೂಡಾ ಇಂತಹ ಹೇಳಿಕೆಗಳನ್ನು ನೀಡಲಿ. ಒಂದು ವೇಳೆ ಕೇಂದ್ರದಲ್ಲಿ ಮೈತ್ರಿ ಸರಕಾರ ರಚನೆಯಾದಲ್ಲಿ ಮಮತಾ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿ ಎಂದು ಇಮಾಮ್ ಹೇಳಿದ್ದಾರೆ

ಬಿಜೆಪಿ ಪ್ರತಿಕ್ರಿಯೆ: ಮಸೀದಿಯೊಂದರ ಇಮಾಮ್ ಮುಖ್ಯಮಂತ್ರಿಗೆ ಸೂಚನೆ ನೀಡುತ್ತಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಮೌಲ್ವಿಯ ಸೂಚನೆಯಂತೆ ನಡೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಹುಲ್ ಸಿನ್ಹಾ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ