ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಈ ಬಾರಿ ಸಂಪುಟ ಸೇರುವುದು ಬಹುತೇಕ ಖಾತ್ರಿಯಾಗಿದ್ದು, ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಹಾಗೂ ತೋಟಗಾರಿಕಾ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರನ್ನು ವಯೋಸಹಜ ಕಾರಣ ನೀಡಿ ಮಂತ್ರಿ ಮಂಡಲದಿಂದ ಕೊಕ್ ಕೊಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ದೃಢಪಡಿಸಿವೆ. ಇದರ ಜತೆಗೆ ಎರಡರಿಂದ ಮೂರು ಸಚಿವರ ಖಾತೆ ಅದಲು-ಬದಲು ಮಾಡುವುದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರ ಜತೆ ಚರ್ಚೆ ನಡೆಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರ ಖಾತೆ ಬದಲಾಗುವ ಸಾಧ್ಯತೆ ಇದೆ. ಫಲಿತಾಂಶ ಪ್ರತಿಕೂಲವಾದರೆ ಹಳೆ ಮೈಸೂರು ಭಾಗದ ಹಿರಿಯ ಸಚಿವರೊಬ್ಬರು 'ಸಿನಿಮೀಯ' ರೀತಿಯಲ್ಲಿ ಅಧಿಕಾರ ಕಳೆದುಕೊಳ್ಳಬಹುದೆಂಬ ಮಾಹಿತಿ ಕಾಂಗ್ರೆಸ್ ಪಾಳಯದಿಂದ ಹೊರಬಿದ್ದಿದೆ.