ಭಾರತದ ಅರ್ಚಕರನ್ನು ಕೈಬಿಟ್ಟ ನೇಪಾಳ

ಶನಿವಾರ, 3 ಜನವರಿ 2009 (20:45 IST)
ನೇಪಾಳವನ್ನು ಗಣರಾಜ್ಯವನ್ನಾಗಿ ಪರಿವರ್ತಿಸಲು ಪ್ರಮುಖ ಪಾತ್ರ ವಹಿಸಿದ್ದ ಮಾವೋವಾದಿಗಳು ವಿಶ್ವಪ್ರಸಿದ್ಧ ಪಶಪತಿನಾಥ ದೇವಾಲಯದ ಅದರಲ್ಲೂ ಕರ್ನಾಟಕದ(ಕುಂದಾಪುರ ಮೂಲದ)ಬ್ರಾಹ್ಮಣರನ್ನು ಅರ್ಚಕರನ್ನಾಗಿ ನೇಮಿಸುವ ಮೂರು ಶತಮಾನಗಳಷ್ಟು ಹಳೆಯ ಪದ್ಧತಿಗೆ ತಿಲಾಂಜಲಿ ನೀಡುವಲ್ಲಿ ಯಶಸ್ವಿಯಾಗಿದೆ.

ಅರಸೊತ್ತಿಗೆ ಅಂತ್ಯಗೊಂಡ ತಕ್ಷಣವೇ ಈ ಪ್ರಕ್ರಿಯೆ ಸದ್ದಿಲ್ಲದೆಯೇ ಆರಂಭಗೊಂಡಿತ್ತು. ಕೊನೆಗೂ ಈ ಪದ್ದತಿ ಅಂತ್ಯಗೊಳಿಸಿ ಸ್ಥಳೀಯ ಬ್ರಾಹ್ಮಣರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವಲ್ಲಿ ಮಾವೋವಾದಿ ಸರ್ಕಾರ ಸಫಲವಾಗಿದೆ.

ಪಶುಪತಿನಾಥ ದೇಗುಲದ ಪೂಜೆಗೆ ದಕ್ಷಿಣ ಭಾರತದ ಭಟ್ಟ ಬ್ರಾಹ್ಮಣರ ಬದಲು ಪ್ರಧಾನ ಅರ್ಚಕ ವಿಷ್ಣು ಪ್ರಸಾದ್ ದಹಲ್ ಸೇರಿದಂತೆ ನೇಪಾಳದ ಭಟ್ಟ ಬ್ರಾಹ್ಮಣರನ್ನು ನೇಮಿಸಲಾಗಿದೆ. ಈ ನಡುವೆ, ದೇಗುಲದ ಪ್ರಧಾನ ಅರ್ಚಕ ಮಹಾಬಲೇಶ್ವರ ಭಟ್ಟ, ಅರ್ಚಕರಾದ ಕೃಷ್ಣಯೋಗ ಭಟ್ಟ ಮತ್ತು ಕೆ.ಪಿ.ರಾಮಚಂದ್ರ ಭಟ್ಟ ಅವರ ರಾಜೀನಾಮೆಯನ್ನು ಪಶುಪತಿ ಪ್ರದೇಶಾಭಿವೃದ್ಧಿ ಮಂಡಳಿ ಅಂಗೀಕರಿಸಿದೆ.

ನೇಪಾಳಿ ಜನರ ಒಳಿತಿಗಾಗಿ ಪ್ರಾರ್ಥನೆ ಮಾಡಿಕೊಳ್ಳುವುದರೊಂದಿಗೆ ತಾವು ಪೂಜಾ ಕೈಂಕರ್ಯ ಆರಂಭಿಸುವುದಾಗಿ ನೂತನ ಪ್ರಧಾನ ಅರ್ಚಕ ದಹಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ