ಮಾನವ ಹಕ್ಕು ಉಲ್ಲಂಘಿಸಿದ ರಾಜ್‌ಪಕ್ಸೆಗೆ ಶಿಕ್ಷೆಯಾಗಲಿ: ಚಿದಂಬರಂ

ಶುಕ್ರವಾರ, 22 ನವೆಂಬರ್ 2013 (15:35 IST)
PTI
ಎಲ್‌ಟಿಟಿಇ ವಿರುದ್ಧ ನಡೆದ ಯುದ್ಧದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ತನಿಖೆಗೆ ಒಳಪಡಿಸಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಹಣಕಾಸು ಸಚಿವ ಪಿ.ಚಿದಂಬರಂ ಅವರು ಶ್ರೀಲಂಕಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಲ್ಲಿ ಆರಂಭವಾದ ದಕ್ಷಿಣ ಏಷ್ಯಾ ನಾಗರಿಕರ ಎರಡನೇ ಸಮಾವೇಶದಲ್ಲಿ ಮಾತನಾಡಿದ ಅವರು, ‘ಮಾನವ ಹಕ್ಕು ಉಲ್ಲಂಘಿಸಿದವರನ್ನು ಶಿಕ್ಷೆಗೆ ಒಳಪಡಿಸುವ ಹೊಣೆಗಾರಿಕೆಗೆ ಲಂಕಾ ಸರ್ಕಾರ ಬದ್ಧವಾಗಿದೆ ಎಂದು ಭಾವಿಸುತ್ತೇನೆ’ ಎಂದರು.

ಸಮಾವೇಶದಲ್ಲಿ 1,000ಕ್ಕೂ ಹೆಚ್ಚು ನಿಯೋಗಗಳು ಭಾಗ­ವಹಿಸಿವೆ. ಕಾಮನ್‌ವೆಲ್ತ್‌ ಶೃಂಗಸಭೆಯಲ್ಲಿ ಭಾಗವಹಿಸಲೆಂದು ಬ್ರಿಟನ್‌ ಪ್ರಧಾನಿ ಡೇವಿಡ್‌ ಕ್ಯಾಮರಾನ್‌ ಅವರು ಕಳೆದ ವಾರ ಲಂಕಾಗೆ ಭೇಟಿ ನೀಡಿದ್ದರು. ಎಲ್‌ಟಿಟಿಇ ವಿರುದ್ಧ ನಡೆದ ಅಂತಿಮ ಸಂಘರ್ಷದಲ್ಲಿ ನಡೆದಿದೆ ಎನ್ನಲಾದ ಯುದ್ಧ ಅಪರಾಧಗಳನ್ನು ತನಿಖೆಗೆ ಒಳಪಡಿಸಲು ಲಂಕಾ ಸರ್ಕಾರಕ್ಕೆ ಮಾರ್ಚ್‌ವರೆಗೆ ಅವರು ಗಡುವು ನೀಡಿದ್ದರು. ಇಲ್ಲದಿದ್ದರೆ ಈ ವಿಷಯವಾಗಿ ಬ್ರಿಟನ್‌ ಸರ್ಕಾರವು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಮೊರೆ ಹೋಗಲಿದೆ ಎಂದು ಎಚ್ಚರಿಕೆ ನೀಡಿದ್ದರು.

ಲಂಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಕಾರಣಕ್ಕೆ ಕೆನಡಾ ಹಾಗೂ ಮಾರಿಷನ್ ಪ್ರಧಾನಿಗಳು ಶೃಂಗಸಭೆಯನ್ನು ಬಹಿಷ್ಕರಿಸಿದ್ದರು.

ತಮಿಳುನಾಡು ಸರ್ಕಾರದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಕಾರಣ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಕೂಡ ಇದರಲ್ಲಿ ಪಾಲ್ಗೊಂಡಿರಲಿಲ್ಲ.

ವೆಬ್ದುನಿಯಾವನ್ನು ಓದಿ