ಶಿವರಾತ್ರಿಯಂದು ಭದ್ರತೆ ನೀಡಿ: ಪಾಕ್ ಹಿಂದೂಗಳು

ಸೋಮವಾರ, 28 ಫೆಬ್ರವರಿ 2011 (18:16 IST)
ಮಾರ್ಚ್ 2ರಿಂದ 4ರವರೆಗೆ ನಡೆಯಲಿರುವ ಶಿವರಾತ್ರಿ ಹಬ್ಬದ ಪ್ರಯುಕ್ತ ಭದ್ರತೆ ನೀಡಲು ನಿರಾಕರಿಸಿರುವ ಜಿಲ್ಲಾ ಸಹಾಯಕ ಅಧಿಕಾರಿ (ಡಿಸಿಓ)ಯನ್ನು ಕೂಡಲೇ ಬೇರೆಡೆಗೆ ವರ್ಗಾಯಿಸಬೇಕೆಂದು ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಚಾಕ್ವಾಲ್ ಪ್ರದೇಶದ ಹಿಂದೂ ಸಂಘಟನೆಗಳು ಒತ್ತಾಯಿಸಿವೆ.

ನಮ್ಮ ಮನವಿಗೆ ಈ ಡಿಸಿಓ ಯಾವುದೇ ರೀತಿಯಲ್ಲೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಅಲ್ಲದೇ ಶಿವರಾತ್ರಿಯಂದು ಭದ್ರತೆ ನೀಡಲು ಕೂಡ ನಿರಾಕರಿಸುತ್ತಿದ್ದಾರೆ ಎಂದು ಆಲ್ ಪಾಕಿಸ್ತಾನ್ ಹಿಂದೂ ರೈಟ್ಸ್ ಅಸೋಸಿಯೇಷನ್ ಅಧ್ಯಕ್ಷ ಹಾರೂನ್ ದಯಾಳ್ ಟಿವಿ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ.

ಚಾಕ್ವಾಲ್‌ನಲ್ಲಿ ನಡೆಯಲಿರುವ ಶಿವರಾತ್ರಿಯಂದು ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಹಾಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಇರಲು ಭದ್ರತೆ ನೀಡಬೇಕಾಗಿದೆ. ಆದರೆ ಡಿಸಿಓ ಅದಕ್ಕೆ ಒಪ್ಪುತ್ತಿಲ್ಲ ಎಂದು ಅವರು ದೂರಿದ್ದಾರೆ.

ಶಿವರಾತ್ರಿಯ ದಿನ ಹಾಗೂ ಸದ್ಯದ ಪರಿಸ್ಥಿತಿ ಬಗ್ಗೆ ಡಿಸಿಓ ಅವರನ್ನು ಖುದ್ದಾಗಿ ಭೇಟಿಯಾಗಿ ವಿವರಿಸಿದರೂ ಅವರು ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಇದು ಅಲ್ಪಸಂಖ್ಯಾತ ಹಿಂದೂಗಳ ಹಕ್ಕನ್ನು ದಮನಮಾಡುವ ನೀತಿಯಾಗಿದೆ. ಆ ನಿಟ್ಟಿನಲ್ಲಿ ನಾವು ಡಿಸಿಓ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ, ಅವರನ್ನು ಕೂಡಲೇ ಇಲ್ಲಿಂದ ವರ್ಗಾಯಿಸಬೇಕೆಂದು ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ