ಭಯೋತ್ಪಾದನೆಯ ಬಗ್ಗೆ ಪಾಕ್ ನಾಯಕರು ಯಾಕೆ ಮೌನವಾಗಿದ್ದಾರೆ: ಮಲಾಲಾ ಪ್ರಶ್ನೆ

ಭಾನುವಾರ, 4 ಅಕ್ಟೋಬರ್ 2015 (12:21 IST)
ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನದ ನಾಯಕರು ಯಾಕೆ ಮೌನವಾಗಿದ್ದಾರೆ ಎಂದು ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ಝಾಯಿ ಪ್ರಶ್ನಿಸಿದ್ದಾರೆ. ಮುಂದೆ ನನಗೆ ದೇಶದ ಪ್ರಧಾನಿಯಾಗುವ ಬಯಕೆಯೂ ಇದೆ ಎಂದು ಹೇಳಿದ್ದಾರೆ. 
 
ಕಳೆದ ವರ್ಷ ಭಾರತದ ಮಕ್ಕಳ ಹಕ್ಕು ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿಯೊಂದಿಗೆ ನೊಬೆಲ್ ಪ್ರಶಸ್ತಿ ಹಂಚಿಕೊಂಡ ಮಲಾಲಾ, ಮುಂಬರುವ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ.
 
ಶಿಕ್ಷಣಕ್ಕಾಗಿ ಸ್ವಾತ್ ಕಣಿವೆಯಲ್ಲಿ ಹೋರಾಟ ನಡೆಸುತ್ತಿರುವಾಗ ಉಗ್ರರು ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ನನಗೆ ಸ್ಪೂರ್ತಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
 
ಮಹಿಳೆಯ ಉತ್ತಮ ನಾಯಕಿಯಾಗಲು ಸಾಧ್ಯವಿಲ್ಲ ಎಂದು ಹಲವಾರು ಜನರು ಅಭಿಪ್ರಾಯಪಡುತ್ತಾರೆ. ಆದರೆ, ಭುಟ್ಟೋ ಮಹಿಳೆ ಉತ್ತಮ ನಾಯಕಿಯಾಗಬಲ್ಲಳು ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.
 
ಭುಟ್ಟೋರಂತೆ ನೀವು ಕೂಡಾ ಪಾಕಿಸ್ತಾನದ ಪ್ರಧಾನಿಯಾಗಲು ಬಯಸುವೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಲಾಲಾ, ಒಂದು ವೇಳೆ ಜನತೆ ನನಗೆ ಮತ ಹಾಕಲು ಬಯಸಿದಲ್ಲಿ ಪ್ರಧಾನಿಯಾಗುವೆ. ಆದರೆ, ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎನ್ನುವುದೇ ನನ್ನ ಕನಸು ಎಂದು ತಿಳಿಸಿದ್ದಾರೆ.
 
ಏತನ್ಮಧ್ಯೆ, ಸಮಾಜದಲ್ಲಿ ಬದಲಾವಣೆ ತರಲು ಪ್ರಧಾನಿಯಾಗುವುದು ಒಂದೇ ಮಾರ್ಗವಲ್ಲ. ಹಲವು ಮಾರ್ಗಗಳಿವೆ ಎಂದು ಮಲಾಲಾ ಯೂಸುಫ್ಝಾಯಿ ಅಭಿಪ್ರಾಯಪಟ್ಟಿದ್ದಾರೆ.
 

ವೆಬ್ದುನಿಯಾವನ್ನು ಓದಿ