ನಡೆದಿರುವುದು ಇಷ್ಟೇ.. ಮಿಲಿಟರಿ ಸಮವಸ್ತ್ರದ ವೇಷಧಾರಿಯೊಬ್ಬ ಸಿಂಹವಿರುವ ಆವರಣದೊಳಕ್ಕೆ ಹಾರಿದ್ದಾನೆ. ಅಲ್ಲಿ ನೆರೆದಿದ್ದ ಜನರು ಆತ ಜೀವಂತ ಮರಳಿ ಬರಲಾರ ಎಂದು ಭಯ, ಆತಂಕ ಮತ್ತು ಕುತೂಹಲದಿಂದ ನೋಡತೊಡಗಿದ್ದಾರೆ. ಕೆಳಕ್ಕೆ ಬಿದ್ದ ಆತ ಮತ್ತೆ ಬೇಲಿ ಹತ್ತಲು ಪ್ರಯತ್ನಿಸಿದ್ದಾನೆ. ಆದರೆ ಅದಾಗಲೇ ಅಲ್ಲಿಗೆ ಬಂದ ಸಿಂಹಿಣಿಯೊಂದು ಆತನ ಕಾಲು ಹಿಡಿದೆಳೆದು ಹೊಂಡದೊಳಗೆ ಬೀಳಿಸಿದೆ. ಇನ್ನೊಂದು ಸಿಂಹ ಆತನ ಬ್ಯಾಗ್ ತೆಗೆದುಕೊಂಡು ಅಲ್ಲಿಂದ ಓಡಿದರೆ, ಮತ್ತೊಂದು ಸಿಂಹ ಆತ ಆಡುವ ವಸ್ತು ಎಂದುಕೊಂಡು ಆಡಲು ಪ್ರಾರಂಭಿಸಿದೆ . ನಂತರ ಆತನನ್ನು ಎಳೆದುಕೊಂಡು ಸುರಂಗದತ್ತ ಸಾಗಿದೆ. ತಕ್ಷಣ ಉಳಿದೆರಡು ಸಿಂಹಗಳೂ ಸೇರಿಕೊಂಡಿವೆ. ಮೂರು ಸಿಂಹಗಳು ಆತನಿಗೆ ಸ್ವಲ್ಪಮಟ್ಟಿಗೆ ಗಾಯ ಮಾಡಿವೆ. ನಂತರ ಅವನೊಂದು ಆಡುವ ವಸ್ತು ಎಂಬಂತೆ ಆತನ ಜತೆ ಆಡತೊಡಗಿವೆ.ಒಟ್ಟು 30 ನಿಮಿಷಗಳ ಕಾಲ ಸಿಂಹಗಳು ಆತನ ಜತೆ ಆಡಿವೆ.
13 ವರ್ಷಗಳ ಕಾಲ ಸಿವಿಲ್ ಗಾರ್ಡ್ ಆಗಿ ಕೆಲಸ ಮಾಡಿದ್ದ ಆತ ಈ ವರ್ಷದ ಪ್ರಾರಂಭದಿಂದ ದೀರ್ಘ ರಜೆಯಲ್ಲಿದ್ದಾನೆ ಎಂದು ತಿಳಿದು ಬಂದಿದೆ. ವರದಿಯ ಪ್ರಕಾರ ಇದೇ ವರ್ಷ ಆತನ ಪತ್ನಿ ವಿಚ್ಛೇದನ ಪಡೆದು ದೂರವಾದಳು. ಮಕ್ಕಳ ಪಾಲನೆ ಜವಾಬ್ದಾರಿಯನ್ನು ಸಹ ಆತ ಕಳೆದುಕೊಂಡ. ತಾಯಿಯೂ ಸಹ ಮರಣವನ್ನಪ್ಪಿದಳು. ಈ ಎಲ್ಲದರಿಂದ ನೊಂದಿದ್ದ ಆತ ಹಾದಿಬೀದಿಯಲ್ಲಿ ರಾತ್ರಿ ಕಳೆಯುತ್ತಿದ್ದ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಆತ ಸಿಂಹದ ಬಾಯಿಗೆ ಆಹಾರವಾಗಲು ಹೊರಟನೋ ಅಥವಾ ಬೇರೆ ಕಾರಣಗಳಿವೆಯೋ ಎಂದು ತಿಳಿದು ಬಂದಿಲ್ಲ.