ಉಗ್ರರನ್ನು ಉಗ್ರರಿಂದಲೇ ಸದೆಬಡೆಯಬೇಕು: ಪಾರಿಕ್ಕರ್ ಹೇಳಿಕೆಗೆ ಆತಂಕ ವ್ಯಕ್ತಪಡಿಸಿದ ಪಾಕ್

ಸೋಮವಾರ, 25 ಮೇ 2015 (17:30 IST)
ಉಗ್ರರನ್ನು ಉಗ್ರರಿಂದಲೇ ಸದೆಬಡೆಯಬೇಕು ಎನ್ನುವ ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪಾರಿಕ್ಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನ, ರಕ್ಷಣಾ ಸಚಿವರ ಹೇಳಿಕೆಯನ್ನು ನೋಡಿದಲ್ಲಿ ಭಾರತ ಉಗ್ರರೊಂದಿಗೆ ಕೈ ಜೋಡಿಸಿದೆ  ಎನ್ನುವ ಶಂಕೆ ಇದೀಗ ನಿಜವಾಗಿದೆ ಎಂದು ಹೇಳಿಕೆ ನೀಡಿದೆ. 
 
ರಕ್ಷಣಾ ಸಚಿವರ ಹೇಳಿಕೆಯಿಂದ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರ ದಾಳಿಗಳಿಗೆ ಭಾರತ ನೇರವಾಗಿ ಹೊಣೆಯಾಗಿದೆ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿದ್ದಾರೆ.
 
ಮೊದಲ ಬಾರಿಗೆ ಚುನಾಯಿತವಾದ ಸರಕಾರದ ಸಚಿವರೊಬ್ಬರು ಬಹಿರಂಗವಾಗಿ ಭಯೋತ್ಪಾದನೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.  ನೆರೆ ರಾಷ್ಟ್ರಗಳ ಮೇಲೆ ಉಗ್ರರ ದಾಳಿಯನ್ನು ಹೆಚ್ಚಿಸುವಲ್ಲಿ ಭಾರತ ಸರಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
 
ಭಯೋತ್ಪಾದನೆ ಉಭಯ ರಾಷ್ಟ್ರಗಳಿಗೂ ಬದ್ಧ ವೈರಿಯಾಗಿದೆ. ಎರಡು ದೇಶಗಳು ಒಂದಾಗಿ ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಉಗ್ರರಿಂದ ಅಪಾರ ಹಾನಿಗೊಳಗಾದ ರಾಷ್ಟ್ರಗಳಲ್ಲಿ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ ಎಂದು ಸರ್ತಾಜ್ ಅಜೀಜ್ ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ