ಪಾಕಿಸ್ತಾನದ ಸೈನಿಕ ಶಾಲೆಯಲ್ಲಿ ನಡೆದ ಮಕ್ಕಳ ಮೇಲಿನ ದೌರ್ಜನ್ಯವನ್ನು ಮೊದಲು ಖಂಡಿಸಿದ್ದು ಭಾರತವೇ. ಭಾರತ ಈ ಮಟ್ಟದ ಬೆಂಬಲಕ್ಕೆ ಪಾಕ್ ನಾಯಕರೇ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ ಉಗ್ರರ ಮಾರಣಹೋಮಕ್ಕೆ ಭಾರತವೇ ಕಾರಣ ಎಂಬ ಹಾಸ್ಯಾಸ್ಪದ ಆರೋಪ ಕೂಡ ಕೇಳಿ ಬಂದಿದೆ. ಭಾರತದ ವಿರುದ್ಧ ಈ ಗಂಭೀರ ಅಪವಾದ ಹೊರಿಸಿರುವುದು ಬೇರೆ ಯಾರೂ ಅಲ್ಲ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಮತ್ತು ಮುಂಬೈ ದಾಳಿಯ ಸಂಚುಕೋರ, ಮೋಸ್ಟ್ ವಾಂಟೆಂಡ್ ಉಗ್ರ ಹಫೀಜ್ ಸಯೀದ್.
ಪಾಕಿಸ್ತಾನದ ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಜಮಾತ್-ಉದ್-ದವಾ (ಜೆಯುಡಿ) ನಾಯಕ ಸಯೀದ್ "ಪೇಶಾವರದ ಶಾಲೆಯ ಮೇಲಿನ ಭಯೋತ್ಪಾದಕ ಕೃತ್ಯಕ್ಕೆ ಭಾರತವೇ ಕುಮ್ಮಕ್ಕು ನೀಡಿದೆ , ಇದಕ್ಕೆ ಪ್ರತೀಕಾರ ತೀರಿಸಿಕೊಂಡೇ ತೀರುತ್ತೇವೆ" ಎಂದು ಬೆದರಿಕೆ ಹಾಕಿದ್ದಾನೆ.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತದ ಗುಪ್ತಚರ ಇಲಾಖೆ 'ರಾ' ಈ ದುಷ್ಕೃತ್ಯಕ್ಕೆ ಕಾರಣ ಎಂದು ಅವರು ಹೇಳಿಕೆ ನೀಡಿದ್ದಾರೆ. ದಾಳಿಯ ಉಸ್ತುವಾರಿ ವಹಿಸಿದ್ದ ಅಪಘಾನಿಸ್ತಾನಿ ಕಮಾಂಡರ್ ಫಜ್ಲುಲ್ಲಾಗೆ ತರಬೇತಿ ನೀಡಿರುವುದು ಭಾರತ. ಅಪಘಾನಿಸ್ತಾನ ಮತ್ತು ಭಾರತದ 'ರಾ'ದ ಜಂಟಿ ಸಹಯೋಗದೊಂದಿಗೆ ದಾಳಿ ನಡೆದಿದೆ ಎಂದು ಮುಷರಫ್ ಆರೋಪಿಸಿದ್ದಾರೆ.