ನಿಮ್ಮ ಜಲಸೀಮೆಯಲ್ಲೇ ಇರಿ, ನಮ್ಮ ಜಲಸೀಮೆಯೊಳಗೆ ಬಂದರೆ ಗುಂಡಿಕ್ಕಿ ಕೊಲ್ಲುವುದಾಗಿ ಶ್ರೀಲಂಕಾ ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆ ಭಾರತೀಯ ಮೀನುಗಾರರಿಗೆ ಎಚ್ಚರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಭೇಟಿ ಇನ್ನು ಒಂದು ವಾರ ಬಾಕಿ ಉಳಿದಿರುವಂತೆ ವಿಕ್ರಮಸಿಂಘೆ ಈ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಯಾರಾದರೂ ನನ್ನ ಮನೆಯೊಳಗೆ ನುಗ್ಗಿದರೆ ನಾನು ಶೂಟ್ ಮಾಡುತ್ತೇನೆ. ಅದೇ ರೀತಿ ನಮ್ಮ ಜಲಸೀಮೆಯೊಳಗೆ ಕಾಲಿಟ್ಟರೂ ಶೂಟ್ ಮಾಡುತ್ತೇವೆ. ನಮ್ಮ ಜಲಪ್ರದೇಶಕ್ಕೆ ಯಾಕೆ ಬರುತ್ತೀರಿ, ನಮ್ಮ ಜಲಸೀಮೆಯಲ್ಲಿ ಮೀನು ಹಿಡಿಯುವುದು ಏತಕ್ಕೆ , ನಿಮ್ಮ ಸೀಮೆಯೊಳಗೇ ಇದ್ದರೆ ಯಾವುದೇ ವಿವಾದವಿಲ್ಲ ಎಂದು ಹೇಳಿದರು.
ಇದನ್ನು ನಾವು ಸ್ನೇಹಿತರಾಗಿ ಮತ್ತು ನೆರೆಹೊರೆಯ ರಾಷ್ಟ್ರಗಳಾಗಿ ಬಗೆಹರಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದರು. ಸುಷ್ಮಾ ಸ್ವರಾಜ್ ಶ್ರೀಲಂಕಾಗೆ ಭೇಟಿ ನೀಡಿದ್ದು, ಈ ವಿಷಯವನ್ನು ವಿಕ್ರಮೆ ಸಿಂಗ್ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದರು.