ಕೃಷಿ ಕ್ಷೇತ್ರಕ್ಕೆ ಸರಕಾರ ಹೆಚ್ಚಿನ ಆದ್ಯತೆ ನೀಡಲಿ: ಉಪೇಂದ್ರ

ಮಂಗಳವಾರ, 26 ನವೆಂಬರ್ 2013 (14:04 IST)
ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಲಾಭಗಳಿಸಲು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ವಿಜಯ ಬ್ಯಾಂಕ್ ಅಧ್ಯಕ್ಷ ಎಚ್.ಎಸ್. ಉಪೇಂದ್ರ ಕಾಮತ್ ಹೇಳಿದರು.

ಅಖಿಲ ಭಾರತೀಯ ವಿಜಯ ಬ್ಯಾಂಕ್ ಅಧಿಕಾರಿಗಳ ಸಂಘ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ 15ನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರಿಗೆ ಬ್ಯಾಂಕ್ ಸೌಲಭ್ಯಗಳು ತಲುಪುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿನ ಶಾಖೆಗಳು ಕಡಿಮೆಯಾಗಿವೆ. ನಾವು ಕೃಷಿ ಯಂತ್ರೋಪಕರಣಗಳಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಮೂಲಕ ರೈತರನ್ನು ಬ್ಯಾಂಕ್ ಕಡೆ ಸೆಳೆಯಬೇಕು. ಇದರಿಂದಾಗಿ ನಾವು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ನಾವು 2 ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ ಹೊಂದಲಾಗಿತ್ತು. ಆ ಗುರಿ ಮುಟ್ಟಿದ್ದೇವೆ. ವಿಜಯ ಬ್ಯಾಂಕ್ ಬಡ್ಡಿದರದಲ್ಲಿ ಶೇ.29ರಷ್ಟು ಮತ್ತು ವಹಿವಾಟು ಆದಾಯದಲ್ಲಿ ಶೇ.27ರಷ್ಟು ಆದಾಯಗಳಿಸಿದ್ದೇವೆ. ಒಟ್ಟಾರೆ ಶೇ.10.5ರಷ್ಟು ನಿವ್ವಳ ಲಾಭಗಳಿಸಿದ್ದೇವೆ ಎಂದರು.

ಸಮಾವೇಶದಲ್ಲಿ ವಿಜಯಬ್ಯಾಂಕ್ ಕಾರ್ಯಕಾರಿ ನಿರ್ದೇಶಕರಾದ ಕೆ.ಆರ್. ಶೆಣೈ, ಆರ್ಥಿಕ ತಜ್ಞ ಎಂ.ಆರ್. ವೆಂಕಟೇಶ್, ಹರವೀಂದ್ರ ಸಿಂಗ್ ಸೇರಿದಂತೆ ಸುಮಾರು 1,200ಕ್ಕೂ ಅಧಿಕ ಅಧಿಕಾರಿಗಳು ಭಾಗವಹಿಸಿದ್ದರು.

ವೆಬ್ದುನಿಯಾವನ್ನು ಓದಿ