ಬಹುದಿನಗಳಿಂದ ನಿರೀಕ್ಷೆ ಹುಟ್ಟಿಸಿ, ಮುಂದೂಡುತ್ತಲೇ ಇದ್ದ ಮೆಟ್ರೋ ರೈಲು ಸೇವೆಗೆ ಶೀಘ್ರವೇ ಚಾಲನೆ ದೊರೆಯಲಿದೆ. ಮುಂದಿನ ತಿಂಗಳು 15 ರಂದು ಪ್ರಧಾನಿ ಮನಮೋಹನ ಸಿಂಗ್ ಅವರು ಮೆಟ್ರೋ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ಮುಂದಿನ ತಿಂಗಳ ಆರಂಭದಿಂದ ಪ್ರಧಾನಿ ಬಾಂಗ್ಲಾದೇಶಕ್ಕೆ ಪ್ರವಾಸ ಹೋಗಲಿರುವುದರಿಂದ, ಪ್ರವಾಸ ಮುಗಿಸಿ ಸೆಪ್ಟೆಂಬರ್ 15 ರಂದು ಮಹತ್ವದ ಯೋಜನೆಯನ್ನು ಉದ್ಘಾಟಿಸಲು ಸಮ್ಮತಿ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ನಿನ್ನೆ ದಿನ ಮೆಟ್ರೋ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರವೇ ರೈಲ್ವೆ ಇಲಾಖಾಧಿಕಾರಿಗಳಿಂದ ಸುರಕ್ಷಿತ ವ್ಯವಸ್ಥೆಯ ಕುರಿತು ತಪಾಸಣೆ ನಡೆಸಬೇಕಾದ ಅವಶ್ಯಕತೆಯಿದ್ದು, ಅವರಿಂದ ಪ್ರಮಾಣ ಪತ್ರ ಪಡೆದ ನಂತರವೇ ಮೆಟ್ರೋ ಚಾಲನೆ ಆರಂಭವಾಗಲಿದೆ ಎಂದು ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಪೂರ್ಣಗೊಂಡಿರುವ ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ 7.5 ಕಿ.ಮೀ. ಸಂಪರ್ಕವನ್ನು ಮಾತ್ರ ಆರಂಭಿಕ ಹಂತದಲ್ಲಿ ಚಾಲನೆಗೊಳಿಸಲಾಗುವುದು ಎಂದವರು ತಿಳಿಸಿದರು.