2015ರೊಳಗೆ ಮಂಗಳನ ಅಂಗಳಕ್ಕೆ ಭಾರತ: ಇಸ್ರೋ

ಸೋಮವಾರ, 31 ಆಗಸ್ಟ್ 2009 (15:28 IST)
2013ರಿಂದ 2015ರೊಳಗೆ ಭಾರತವು ಮಂಗಳ ಯಾತ್ರೆಯನ್ನು ಕೈಗೊಳ್ಳಲಿದೆ ಎಂದು ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ಇಸ್ರೋ) ಮುಖ್ಯಸ್ಥ ಜಿ. ಮಾಧವನ್ ನಾಯರ್ ಸೋಮವಾರ ತಿಳಿಸಿದ್ದಾರೆ.

ನಾವು ವಿಜ್ಞಾನಿಗಳ ವಿವಿಧ ಸಮುದಾಯಗಳಿಗೆ ಈಗಾಗಲೇ ಪ್ರಸ್ತಾವನೆಯ ಕರೆ ಕೊಟ್ಟಿದ್ದೇವೆ. ಅವರು ಸಲ್ಲಿಸುವ ಪ್ರಸ್ತಾವನೆಯಲ್ಲಿರುವ ಪ್ರಯೋಗಗಳ ವಿಧಗಳನ್ನು ಗಮನಿಸಿ ನಾವು ಮಂಗಳ ಯಾತ್ರೆ ಕುರಿತು ಯೋಜನೆಯನ್ನು ಸಿದ್ಧಪಡಿಸಲು ಸಾಧ್ಯವಾಗುತ್ತದೆ ಎಂದರು.
PR


ಪ್ರಸಕ್ತ ಈ ಯೋಜನೆಯು ಕೇವಲ ಕಾಲ್ಪನಿಕ ಹಂತದಲ್ಲಷ್ಟೇ ಇದ್ದು, ಚಂದ್ರಯಾನ-2ನ್ನು ಪೂರೈಸಿದ ನಂತರ ಚಾಲ್ತಿಗೆ ಬರಲಿದೆ. ಎರಡು ವರ್ಷಕ್ಕೊಮ್ಮೆ ಮಾತ್ರ ಇಂತಹ ಯಾತ್ರೆಗಳನ್ನು ಕೈಗೊಳ್ಳುವ ಅವಕಾಶ ಲಭಿಸುತ್ತದೆ ಎಂದು ನಾಯರ್ ತಿಳಿಸಿದ್ದಾರೆ.

ಕಡಿಮೆ ವೆಚ್ಚದ ಬಾಹ್ಯಾಕಾಶ ಯಾತ್ರೆ ಕುರಿತ ಎಂಟನೇ ಅಂತಾರಾಷ್ಟ್ರೀಯ ಸಮಾವೇಶದ ಆಯೋಜನೆಗಾಗಿ ಇಸ್ರೋ ಅಧ್ಯಕ್ಷರು ಗೋವಾದಲ್ಲಿದ್ದು, ಈ ಸಂದರ್ಭದಲ್ಲಿ ಹಲವು ಮಾಹಿತಿಗಳನ್ನು ಹೊರಗೆಡಹಿದರು.

100 ಮಿಲಿಯನ್ ಡಾಲರ್‌ಗಳಿಗೂ ಕಡಿಮೆ ವೆಚ್ಚದಲ್ಲಿ ಚಂದ್ರಯಾನ-1ನ್ನು ನಾವು ಮುಗಿಸಿರುವಂತೆ, ಮಂಗಳ ಯಾನವನ್ನೂ ಕಡಿಮೆ ವೆಚ್ಚದಲ್ಲೇ ಕೈಗೊಳ್ಳಲಿದೆ ಎಂದು ಅವರು ವಿವರಿಸಿದ್ದಾರೆ.

ಭಾರತದ ಚಂದ್ರಯಾನ-1 ಗಗನನೌಕೆಯು ಕಳೆದೆರಡು ದಿನಗಳ ಹಿಂದೆ ತನ್ನ ಯಾತ್ರೆಯನ್ನು ಅಂತ್ಯಗೊಳಿಸಿದ್ದು, ಸಾಕಷ್ಟು ಮಾಹಿತಿಗಳನ್ನು ನಮಗೆ ನೀಡಿದೆ ಎಂದು ಇಸ್ರೋ ತಿಳಿಸಿದೆ. ನಾವಿದರಲ್ಲಿ ಶೇ.95ರಷ್ಟು ಯಶಸ್ವಿಯಾಗಿದ್ದೇವೆ ಎನ್ನುವುದು ನಾಯರ್ ಅಭಿಪ್ರಾಯ.

ಎರಡು ವರ್ಷಗಳ ಆಯುಷ್ಯ ಹೊಂದಿದ್ದ ಚಂದ್ರಯಾನ ನೌಕೆಯು ಒಂದೇ ವರ್ಷದ ಅವಧಿಯಲ್ಲಿ ಇಸ್ರೋ ಸಂಪರ್ಕ ಕಳೆದುಕೊಂಡಿತ್ತು.

ವೆಬ್ದುನಿಯಾವನ್ನು ಓದಿ