ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಬಜೆಟ್ ಪ್ರಸ್ತಾವನೆಗಳಲ್ಲಿ ಭವಿಷ್ಯ ನಿಧಿ ಹಣ ವಾಪಸ್ ಪಡೆಯುವ ಕುರಿತಂತೆ ಆದಾಯ ತೆರಿಗೆ ಕಾನೂನನ್ನು ಬಿಗಿಗೊಳಿಸಿದ್ದಾರೆ. ಪ್ರಸ್ತಾಪಿತ ತೆರಿಗೆ ಕಾನೂನಿನ ಅನ್ವಯ ಐದು ವರ್ಷಗಳ ಸತತ ಸೇವೆಗಿಂತ ಮುಂಚಿತವಾಗಿ ಭವಿಷ್ಯ ನಿಧಿ ಹಿಂಪಡೆದರೆ ಶೇ. 10ರಷ್ಟು ಟಿಡಿಎಸ್ ಕಡಿತ ಮಾಡಲಾಗುತ್ತದೆ. ಸತತ ಐದು ವರ್ಷಗಳ ಸೇವಾವಧಿಯನ್ನು ಲೆಕ್ಕ ಹಾಕುವಾಗ ಹಿಂದಿನ ಉದ್ಯೋಗವನ್ನು ಕೂಡ ಸೇರಿಸಲಾಗುತ್ತದೆ.
ಹಿಂದಿನ ಪಿಎಫ್ ಖಾತೆಯಿಂದ ಹೊಸ ಪಿಎಫ್ ಖಾತೆಗೆ ಉಳಿಕೆ ಹಣ ವರ್ಗಾವಣೆಗೊಂಡಿರಬೇಕು. ಭವಿಷ್ಯ ನಿಧಿ ವಾಪಸಾತಿ 30,000 ರೂ.ಗಿಂತ ಕಡಿಮೆಯಿದ್ದರೆ ಟಿಡಿಎಸ್ ಕಡಿತ ಅನ್ವಯವಾಗುವುದಿಲ್ಲ. ತಮ್ಮ ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಘೋಷಣೆ ಮಾಡುವ ವ್ಯಕ್ತಿಗಳಿಗೆ ಹೊಸ ಪ್ರಸ್ತಾವನೆ ಅನ್ವಯವಾಗುವುದಿಲ್ಲ ಎಂದು ಇವೈ ನಿರ್ವಾಹಕ ತೆರಿಗೆ ನಿರ್ದೇಶಕ ಮಯೂರ್ ಷಾ ಹೇಳಿದ್ದಾರೆ.