ಜಿಎಸ್‌ಟಿ ಶೀಘ್ರದಲ್ಲೇ ವಾಸ್ತವರೂಪ: ಅರುಣ್ ಜೇಟ್ಲಿ ವಿಶ್ವಾಸ

ಗುರುವಾರ, 4 ಫೆಬ್ರವರಿ 2016 (19:48 IST)
ಜಿಎಸ್‌ಟಿಯನ್ನು ಅನೇಕ ಪಕ್ಷಗಳು ಬೆಂಬಲಿಸಿದ್ದು, ಉಳಿದವರು ಕೂಡ ಇದನ್ನು ಪರಿಗಣಿಸಬೇಕಾದ ಕಾರಣ ಅರಿಯುವುದರಿಂದ ರಾಜ್ಯಸಭೆಯಲ್ಲಿ ಇದು ವಾಸ್ತವರೂಪ ಪಡೆಯುತ್ತದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.. ಎರಡು ದಿನಗಳ ಬಂಡವಾಳ ಹೂಡಿಕೆ ಶೃಂಗಸಭೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,   ಸರ್ಕಾರ ಕೂಡ ನೇರ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಪ್ರಕ್ರಿಯೆಯಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಅವರು ಹೇಳಿದರು. 
 
 ನಮ್ಮ ನೇರ ತೆರಿಗೆ ವ್ಯವಸ್ಥೆ ಸುಧಾರಿಸುವ ಮೂಲಕ ಸ್ಪರ್ಧಾತ್ಮಕ ಆರ್ಥಿಕತೆಗೆ ಹೋಲಿಕೆಯಾಗುವಂತೆ ಮಾಡಲು ನಾವು ಬಯಸಿದ್ದೇವೆ ಎಂದು ಜೇಟ್ಲಿ ನುಡಿದರು.
 
 ಸುಧಾರಣೆಯು ನಿರಂತರ ಪ್ರಕ್ರಿಯೆಯಾಗಿದ್ದು, ಅದಕ್ಕೆ ಮುಕ್ತಾಯದ ಗೆರೆಯಿಲ್ಲ ಎಂದು ಅವರು ನುಡಿದರು. 
ಜಿಎಸ್‌ಟಿಯು ಅಬ್ಕಾರಿ ಸುಂಕ, ಸೇವಾ ತೆರಿಗೆ, ಮಾರಾಟ ತೆರಿಗೆ ಮುಂತಾದ ಎಲ್ಲಾ ಪರೋಕ್ಷ ತೆರಿಗೆಗಳನ್ನು ವಿಲೀನಗೊಳಿಸಿ ಏಕರೂಪ ದರಕ್ಕೆ ತರುವುದಾಗಿದ್ದು, ಕಾಂಗ್ರೆಸ್ ಮೂರು ಮಾರ್ಪಾಡುಗಳಿಗೆ ಒತ್ತಡ ಹಾಕುತ್ತಿರುವುದರಿಂದ ರಾಜ್ಯಸಭೆಯಲ್ಲಿ ಸ್ಥಗಿತಗೊಂಡಿದೆ ಎಂದು ಹೇಳಿದರು. 
 
ಕಾಂಗ್ರೆಸ್ ಪಕ್ಷವು ಸಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರ ಸ್ಥಗಿತಗೊಳಿಸಿ ಜಿಎಸ್‌ಟಿಯನ್ನು 2016ರ ಏಪ್ರಿಲ್ 1ರಿಂದ ಜಾರಿಗೆ ತರುವ ಸರ್ಕಾರದ ಯೋಜನೆಯ ಹಳಿತಪ್ಪಿಸಿದೆ. ಸಂವಿಧಾನದಲ್ಲಿ ಜಿಎಸ್‌ಟಿ ದರಕ್ಕೆ ಮಿತಿ, ಅಂತರರಾಜ್ಯ ಸರಕು ಸಾಗಣೆಗೆ ಉದ್ದೇಶಿತ ಶೇ. 1 ಹೆಚ್ಚುವರಿ ತೆರಿಗೆಯನ್ನು ತೆಗೆಯಬೇಕು ಮತ್ತು ರಾಜ್ಯಗಳ ನಡುವೆ ವಿವಾದಗಳ ಇತ್ಯರ್ಥಕ್ಕೆ ನ್ಯಾಯಾಂಗ ಸಮಿತಿಯನ್ನುಸ್ಥಾಪಿಸಬೇಕು ಎಂಬ ಮೂರು ಬೇಡಿಕೆಗಳನ್ನು ಕಾಂಗ್ರೆಸ್ ಮಂಡಿಸಿದೆ. 

ವೆಬ್ದುನಿಯಾವನ್ನು ಓದಿ