ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಲೋಕಸಭೆಯಲ್ಲಿ ಇಂದು ಮಂಡನೆ

ಶನಿವಾರ, 20 ಡಿಸೆಂಬರ್ 2014 (14:20 IST)
ಸರ್ಕಾರ ಶುಕ್ರವಾರ ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್‌ಟಿ ಮಸೂದೆಯನ್ನು ಇಂದು ಲೋಕಸಭೆಯಲ್ಲಿ  ಮಂಡಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮಸೂದೆಯನ್ನು ಸ್ವಾತಂತ್ರ್ಯದ ನಂತರ ಅತೀ ದೊಡ್ಡ ತೆರಿಗೆ ಸುಧಾರಣೆ ಎಂದು ಹೇಳಲಾಗಿದ್ದು, ವಿಶ್ಲೇಷಕರು ಇದನ್ನು ವ್ಯವಹಾರದ ವೆಚ್ಚ ತಗ್ಗಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುತ್ತದೆಂದು ಶ್ಲಾಘಿಸಿದ್ದಾರೆ.

ಪ್ರಸ್ತುತ ಅಸ್ತಿತ್ವದಲ್ಲಿರುವ ಅನೇಕ ಲೆವಿಗಳನ್ನು ಜಿಎಸ್‌ಟಿ ರದ್ದು ಮಾಡಿ ಏಕರೂಪ ಆಂತರಿಕ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ. ಜಿಎಸ್‌ಟಿ ಸಾರ್ವಜನಿಕ ಬೊಕ್ಕಸ ತುಂಬಿಸಿ ತೆರಿಗೆ ನೆಲೆಯನ್ನು ವಿಶಾಲಗೊಳಿಸುತ್ತದೆ ಎಂದು ಆರ್ಥಿಕತಜ್ಞರು ಹೇಳಿದ್ದಾರೆ. ತೆರಿಗೆ ಬದಲಾವಣೆಯಿಂದ ಆದಾಯ ನಷ್ಟಕ್ಕೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಸಂವಿಧಾನಿಕ ಭರವಸೆ ನೀಡುವುದಾಗಿ ಹಣಕಾಸು ಸಚಿವ ಜೇಟ್ಲಿ ಹೇಳಿದ್ದಾರೆ.

ಜಿಎಸ್‌ಟಿಯಿಂದ ಭಾರತದ ತೆರಿಗೆಗಳ ತೇಪೆಹಾಕುವ ಕೆಲಸ ಕೊನೆಗೊಳ್ಳುತ್ತದೆ. ಪ್ರತಿಯೊಂದು ರಾಜ್ಯ ಸಂವಿಧಾನಿಕ ಅಧಿಕಾರ ಬಳಸಿಕೊಂಡು ವಿವಿಧ ಪದಾರ್ಥಗಳಿಗೆ ವಿವಿಧ ದರಗಳ ತೆರಿಗೆಯನ್ನು ಹೇರುತ್ತಿತ್ತು. ಏಕರೂಪ ತೆರಿಗೆ ರಚನೆ  ಸೃಷ್ಟಿ ಅತ್ಯಂತ ಜಟಿಲ ಸುಧಾರಣೆ ಸಾಧನೆಯಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.  

ಜಿಎಸ್‌ಟಿಯನ್ನು ಜಾರಿಗೆ ತರಲು ಸಂವಿಧಾನಿಕ ತಿದ್ದುಪಡಿ ಅಗತ್ಯವಿದ್ದು, ಭಾರತದ ಬಹುತೇಕ ರಾಜ್ಯಗಳ ಅನುಮತಿ ಒಳಗೊಂಡಿದೆ. ತೆರಿಗೆ ಹೇರುವ ತಮ್ಮ ಹಕ್ಕನ್ನು ಮೊಟಕು ಮಾಡುವುದಕ್ಕೆ ಕೆಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಇದರ ಜೊತೆ ಎರಡೂ ಸದನಗಳಲ್ಲಿ ಮೂರನೇ ಎರಡು ಬಹುಮತದೊಂದಿಗೆ ಮಸೂದೆಗೆ ಅನುಮೋದನೆ ಪಡೆಯಬೇಕಾಗಿದೆ. 

ವೆಬ್ದುನಿಯಾವನ್ನು ಓದಿ