ಜೈಲಿನಲ್ಲಿ ಈಗ ದರ್ಶನ್ ಗೆ ನರಕದರ್ಶನ: ಈ ಎಲ್ಲಾ ಕೆಲಸ ಮಾಡಬೇಕು ದಾಸ
ವಿಚಾರಣಾಧೀನ ಖೈದಿಯಾಗಿದ್ದರೂ ದರ್ಶನ್ ಗೆ ಜೈಲಿನಲ್ಲಿ ಇತರೆ ಖೈದಿಗಳಂತೆ ಕಠಿಣ ನಿಯಮ ಜಾರಿ ಮಾಡಲಾಗಿದೆ. ಹೊಸದಾಗಿ ಜೈಲು ಸೂಪರಿಟೆಂಡೆಂಟ್ ಆಗಿ ನೇಮಕವಾಗಿರುವ ಐಪಿಎಸ್ ಅಂಶುಕುಮಾರ್ ಜೈಲಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ.
ಹೀಗಾಗಿ ಈಗ ವಿಐಪಿ ಎಂಬ ಕಾರಣಕ್ಕೆ ದರ್ಶನ್ ಗೆ ಸ್ಪೆಷಲ್ ಟ್ರೀಟ್ಮೆಂಟ್ ಇಲ್ಲ. ಇಷ್ಟು ದಿನ ಬ್ಯಾರಕ್ ನಲ್ಲೇ ದರ್ಶನ್ ಗೆ ಊಟ ಬರುತ್ತಿತ್ತು. ಆದರೆ ಈಗ ದರ್ಶನ್ ಕೂಡಾ ಇತರೆ ಖೈದಿಗಳಂತೆ ಸರತಿ ಸಾಲಿನಲ್ಲಿ ನಿಂತು ಊಟ ಪಡೆಯಬೇಕಾಗಿದೆ. ಊಟ ಮುಗಿಸಿ ಬ್ಯಾರಕ್ ಗೆ ಹೋಗಬೇಕು. ಇಷ್ಟು ದಿನ ವಾಕಿಂಗ್ ಅವಕಾಶವಿತ್ತು. ಅದನ್ನೂ ಕಡಿತಗೊಳಿಸಲಾಗಿದೆ. ಬಟ್ಟೆ ತೊಳೆದು ಒಣ ಹಾಕಕ್ಕೆ ಮಾತ್ರ ಸ್ವಲ್ಪ ಹೊರಗೆ ಬರುವ ಅವಕಾಶವಿದೆ. ಅದನ್ನು ಬಿಟ್ಟರೆ ಇತರೆ ಖೈದಿಗಳಂತೆ ಬ್ಯಾರಕ್ ಒಳಗೇ ಇರಬೇಕು. ಈಗಾಗಲೇ ಜೈಲಿನಲ್ಲಿ ತಮ್ಮನ್ನು ಭಯೋತ್ಪಾದಕನಂತೆ ನಡೆಸಿಕೊಳ್ಳಲಾಗುತ್ತದೆ ಎಂದು ದರ್ಶನ್ ವಕೀಲರ ಮೂಲಕ ನ್ಯಾಯಾಲಯಕ್ಕೆ ಮೊರೆಯಿಟ್ಟಿದ್ದರು. ಇದೀಗ ಹೊಸ ನಿಯಮಗಳ ಬಗ್ಗೆ ನ್ಯಾಯಾಲಯದಲ್ಲಿ ದೂರು ನೀಡುವ ಸಾಧ್ಯತೆಯಿದೆ.