ಟಪ್ಪಾಂಗುಚ್ಚಿ ಹಾಡೊಂದಕ್ಕೆ ಗಾಯಕರಾದ ಪ್ರೇಮಕವಿ ಕೆ ಕಲ್ಯಾಣ್

ಸೋಮವಾರ, 19 ಜೂನ್ 2017 (12:07 IST)
ಬೆಂಗಳೂರು: ಈ ವರೆಗೆ ಗೀತರಚನೆಕಾರರಾಗಿ, ಮ್ಯೂಸಿಕ್ ಡೈರೆಕ್ಟರ್ ಆಗಿ ಗಮನ ಸೆಳೆದಿದ್ದ ಕೆ ಕಲ್ಯಾನ ಈಗ ಗಾಯಕರಾಗಿದ್ದಾರೆ. ಮುತ್ತುಗಳನ್ನು ಪೋಣಿಸಿಟ್ಟಂತ ಸಾಹಿತ್ಯದ ಮೂಲಕ 3000ಕ್ಕೂ ಹೆಚ್ಚು ಹಾಡುಗಳನ್ನು ಬರೆದಿರುವ ಕೆ ಕಲ್ಯಾಣ್ ಈಗ ಮೊದಲ ಬಾರಿಗೆ ’ಜೊತೆಯಾಗಿರು’ ಚಿತ್ರದ ಮೂಲಕ ಗಾಯಕರಾಗಿದ್ದಾರೆ.
 
ಬಹುತೇಕ ಹೊಸಬರೇ ಇರುವ ಸತೀಶ್‌ ರೇ ನಿರ್ದೇಶನದ "ಜೊತೆಯಾಗಿರು' ಚಿತ್ರದಲ್ಲಿ ವಿರಾಟ್‌ ವೆಂಕಟೇಶ್‌ ನಾಯಕರಾಗಿದ್ದು, ರಶ್ಮಿ ನಾಯಕಿ. ಸುನೀಲ್‌ ಕಾಂಚನ್‌ ಸೇರಿದಂತೆ ಹಲವು ಹೊಸ ಕಲಾವಿದರೇ ನಟಿಸಿದ್ದಾರೆ. ಚಿತ್ರಕ್ಕೆ ವಿನು ಮನಸು ಸಂಗೀತವಿದೆ. ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಹಾಡಿಗೆ ಕೆ.ಕಲ್ಯಾಣ್‌ ದನಿಯಾಗಿದ್ದಾರೆ.
 
ಸತೀಶ್‌ ರೇ ಅವರು ಬರೆದ, "ಊರ್‌ ತುಂಬ ಹುಡುಗೀರು, ನಮಗಂತ ಯಾರವರೊ, ಯಾವುದೂನು ಗೊತ್ತಾಗ್ತಿಲ್ವಲ್ಲ ...' ಎಂಬ ಟಪ್ಪಾಂಗುಚ್ಚಿ ಹಾಡಿಗೆ ಕೆ.ಕಲ್ಯಾಣ್‌ ತಮ್ಮ ದನಿ ಕೊಟ್ಟಿದ್ದಾರೆ. ಸ್ವತಃ ಸಂಗೀತ ನಿರ್ದೇಶಕರಾಗಿದ್ದರೂ ಕಲ್ಯಾಣ್‌, ಎಂದೂ ಹಾಡುವ ಪ್ರಯತ್ನ ಮಾಡಿರಲಿಲ್ಲ. ಟ್ರ್ಯಾಕ್‌ ಹಾಡಿ, ಗಾಯಕರಿಗೆ ಹೇಳಿ ಕೊಡುತ್ತಿದ್ದ ಕಲ್ಯಾಣ್‌ಗೆ, ಈ ಹೊಸಬರ ತಂಡ, ಒಮ್ಮೆಲೆ ಹಾಡಿ ಅಂತ ಪೀಡಿಸಿದ್ದರಿಂದ, "ಒಂದು ಪ್ರಯತ್ನ ಮಾಡುತ್ತೇನೆ, ಚೆನ್ನಾಗಿಲ್ಲ ಎನಿಸಿದರೆ, ತೆಗೆದು ಬೇರೆ ಗಾಯಕರಿಂದ ಹಾಡಿಸಿ' ಅಂದಿದ್ದರಂತೆ ಕಲ್ಯಾಣ್‌. ಕೊನೆಗೆ ಕಲ್ಯಾಣ್‌ ದನಿ ಕೇಳಿದ ತಂಡ, ಅವರ ವಾಯ್ಸ ಫಿಕ್ಸ್‌ ಮಾಡಿಬಿಟ್ಟಿದೆ. ಅಂದಹಾಗೆ, ಈ ಹಾಡು ಹಾಡುತ್ತಿದ್ದಂತೆಯೇ, ಈಗ ಇನ್ನೂ ಎರಡು ಸಿನಿಮಾಗಳಲ್ಲಿ ಹಾಡುವ ಕೋರಿಕೆಯೂ ಕಲ್ಯಾಣ್‌ಗೆ ಬಂದಿದೆಯಂತೆ.
 

ವೆಬ್ದುನಿಯಾವನ್ನು ಓದಿ