ದರ್ಶನ್‌ ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸಿದ್ದ ಕರಿಯ ಚಿತ್ರ ಮತ್ತೆ ತೆರೆಗೆ: ಅತಿರೇಕ ಮಾಡಬೇಡಿ ಎಂದ ಪ್ರೇಮ್‌

Sampriya

ಭಾನುವಾರ, 25 ಆಗಸ್ಟ್ 2024 (13:37 IST)
Photo Courtesy X
ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗೆ ಚಿತ್ರರಂಗದಲ್ಲಿ ಹೊಸ ಇಮೇಜ್‌ ಅನ್ನು ನೀಡಿದ್ದ ಕರಿಯ ಸಿನಿಮಾ ಆಗಸ್ಟ್‌ 30ರಂದು ರಾಜ್ಯದ ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆಯಾಗಲಿದೆ.

ಈ ಕುರಿತು ಚಿತ್ರದ ನಿರ್ದೇಶಕ ಪ್ರೇಮ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡು ಈ ಮಾಹಿತಿ ನೀಡಿದ್ದಾರೆ. ದರ್ಶನ್‌ ಮತ್ತು ಅಭಿನಯಶ್ರೀ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವು ಸೂಪರ್ ಹಿಟ್‌ ಆಗಿತ್ತು. ಭೂಗತ ಲೋಕದ ಚಿತ್ರಕಥೆಯನ್ನು ಹೊಂದಿರುವ ಈ ಸಿನಿಮಾದ ಬಳಿಕ ದರ್ಶನ್‌ ಅವರ ಬ್ರ್ಯಾಂಡ್‌ ಮೌಲ್ಯವೂ ಜಾಸ್ತಿಯಾಗಿತ್ತು.

ಭಾರತೀಯ ಚಿತ್ರರಂಗದಲ್ಲಿ ಇದೊಂದು ಮೈಲಿಗಲ್ಲು, ಕರಿಯ ಇದು ನಿಮ್ಮಿಂದ. ಅಭಿಮಾನಿಗಳು ಶಾಂತಿ, ತಾಳ್ಮೆ ಹಾಗೂ ಪ್ರೀತಿಯಿಂದ ಕರಿಯನನ್ನು ಹರಸಿ ಹಾರೈಸಿ. ಯಾವುದೇ ಅತಿರೇಕಗಳನ್ನು ಮಾಡಬೇಡಿ. ನಿಮ್ಮ ಆನ್‌ಲೈನ್‌ ಬರವಣಿಗೆಗಳು ಬೇರೆಯವರಿಗೆ ನೋವು ತರದಿರಲಿ. ದರ್ಶನ್‌ ಅವರು ಕಾನೂನು ಮುಕ್ತರಾಗಿ ಆದಷ್ಟು ಬೇಗ ಹೊರಗೆ ಬಂದು ನಿಮ್ಮ, ನಮ್ಮ ಜೊತೆ ಬೆರೆಯಲಿ, ಬೆಳಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಿರ್ದೇಶಕ ಪ್ರೇಮ್‌ ಬರೆದುಕೊಂಡಿದ್ದಾರೆ.

ಚಿತ್ರದುರ್ಗಾದ ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆಗಸ್ಟ್‌ 28ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ