ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ತಡೆಯೊಡ್ಡಿದರೆ ತಮಿಳು ಚಿತ್ರ ಪ್ರದರ್ಶನವೂ ಬಂದ್: ಸಾ.ರಾ. ಗೋವಿಂದು ಎಚ್ಚರಿಕೆ

ಶನಿವಾರ, 22 ಏಪ್ರಿಲ್ 2017 (12:28 IST)
ಸತ್ಯರಾಜ್ ಕ್ಷಮೆಯಾಚನೆ ಬಳಿಕ ತಮಿಳುನಾಡಿನ ಮಾಲ್`ಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ನಿಲ್ಲಿಸಲಾಗಿದೆ ಎಂಬ ಸುದ್ದಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೇನಾದರೂ ಆದಲ್ಲಿ ಕರ್ನಾಟಕದಲ್ಲಿ ತಮಿಳು ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರಗಳ ಪ್ರದರ್ಶನ ರದ್ದಾದ ಬಗ್ಗೆ ಮಾಹಿತಿ ಪಡೆಯುತ್ತೇವೆ. ಚಿತ್ರ ಪ್ರದರ್ಶನ ರದ್ದಾಗುವುದಿಲ್ಲ ಎಂದು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ನಮಗೆ ಭರವಸೆ ನೀಡಿದೆ. ಆದಾಗ್ಯೂ, ಕನ್ನಡ ಚಲನಚಿತ್ರ ಪ್ರದರ್ಶನ ರದ್ದಾದಲ್ಲಿ ಪ್ರತೀಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ, ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ ಎಂಬ ವರದಿಗಳ ಹಿನ್ನೆಲೆ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು, ತಮಿಳು ಪೋಸ್ಟರ್`ಗಳನ್ನ ಹರಿದು ಪ್ರತಿಭಟನೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ