ಗುಲ್ವಾಡಿ, ಬೆಳಗೆರೆ ಸಹಿತ 29 ಮಂದಿಗೆ ಮಾಧ್ಯಮ ಪ್ರಶಸ್ತಿ

ಶನಿವಾರ, 2 ಫೆಬ್ರವರಿ 2008 (11:09 IST)
ಹಿರಿಯ ಪತ್ರಕರ್ತರಾದ ಸಂತೋಷ್ ಕುಮಾರ್ ಗುಲ್ವಾಡಿ, ನಾಗೇಶ್ ಹೆಗಡೆ, ಮನೋಹರ ಪ್ರಸಾದ್ ಹಾಗೂ ರವಿ ಬೆಳಗೆರೆ ಸೇರಿದಂತೆ 29 ಮಂದಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಿತಾವಧಿ ಪ್ರಶಸ್ತಿಯನ್ನು ಪ್ರಕಟಿಸಿದೆ.

ಈನಾಡು ನ್ಯೂಸ್ ಟೈಮ್ ಪತ್ರಿಕೆಯ ನವದೆಹಲಿ ಪ್ರತಿನಿಧಿ ಗಿರೀಶ್ ನಿಕ್ಕಂ ಅವರಿಗೆ ವಿಶೇಷ ಪ್ರಶಸ್ತಿ ರೂಪವಾಗಿ 15 ಸಾವಿರ ರೂ. ನಗದು ಬಹುಮಾನವನ್ನು ಘೋಷಿಸಲಾಗಿದ್ದರೆ, ಜೀವಿತಾವಧಿ ಪ್ರಶಸ್ತಿ ವಿಜೇತರಿಗೆ 10 ಸಾವಿರ ರೂ. ನಗದು ಬಹುಮಾನ ಪ್ರಕಟಿಸಲಾಗಿದೆ.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ವಿ.ಎನ್.ಸುಬ್ಬರಾವ್ ಈ ಪ್ರಕಟಣೆ ನೀಡಿದ್ದು, ಮಾರ್ಚ್ 1 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಇದುವರೆಗೂ ಅನುಸರಿಸಲಾಗುತ್ತಿದ್ದ ಕ್ರಮದಂತೆ ಪ್ರತಿವರ್ಷ 14 ಮಂದಿಗೆ ಮಾತ್ರ ಜೀವಿತಾವಧಿ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಈ ವರ್ಷ ಅಕಾಡೆಮಿಗೆ ಬೆಳ್ಳಿವರ್ಷದ ಸಂಭ್ರಮ. ಆದ್ದರಿಂದ ಜಿಲ್ಲೆಗೆ ಒಬ್ಬರಂತೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ