ಬಿಜೆಪಿಗೆ ಸಿಕ್ತು ಆನೆಬಲ, ಯಡಿಯೂರಪ್ಪ ಮರಳಿದರು ಮಾತೃಪಕ್ಷಕ್ಕೆ

ಗುರುವಾರ, 9 ಜನವರಿ 2014 (12:24 IST)
PR
PR
ಬೆಂಗಳೂರು: ಬಿಜೆಪಿಯನ್ನು ತೊರೆದು ಕೆಜೆಪಿಯನ್ನು ಕಟ್ಟಿದ ಒಂದೂವರೆ ವರ್ಷಗಳ ನಂತರ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಎಸ್‌ವೈ ಜತೆಗೆ ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆಯಾದರು. ಮಾಜಿ ಸಚಿವೆ ಶೋಭಾ ಕರಾಂದ್ಲಜೆ, ಮೂವರು ಶಾಸಕರು, ಕೆಜೆಪಿ ರಾಜ್ಯ ಪದಾಧಿಕಾರಿಗಳು, ಕೆಜೆಪಿ ಜಿಲ್ಲಾಧ್ಯಕ್ಷರು ಯಡಿಯೂರಪ್ಪನವರಿಗೆ ಸಾಥ್ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಯಡಿಯೂರಪ್ಪನವರಿಗೆ ಪ್ರಾಥಮಿಕ ಸದಸ್ಯತ್ವದ ಅರ್ಜಿಯನ್ನು ನೀಡಿದರು. 11 ಗಂಟೆಗೆ ಬಿಜೆಪಿಯ ಮಲ್ಲೇಶ್ವರಂ ಕಚೇರಿಯಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದರು.ಮರುಸೇರ್ಪಡೆಯಾದ ಹಿನ್ನೆಲೆಯಲ್ಲಿ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಯಡಿಯೂರಪ್ಪ ಸಲ್ಲಿಸಿದರು.

ಧನಂಜಯ್ ಕುಮಾರ್ ಮಾತ್ರ ತಾವು ಬಿಜೆಪಿಗೆ ಸೇರಿಲ್ಲ ಎಂದು ಹೇಳಿದ್ದಾರೆ. ಧನಂಜಯ್ ಕುಮಾರ್ ಬಿಜೆಪಿಗೆ ಸೇರಲು ಅಡ್ವಾಣಿಯವರಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲವೆಂದು ಹೇಳಲಾಗುತ್ತಿದೆ. ನಂತರ ಬಿಜೆಪಿ ಕಚೇರಿಗೆ ಯಡಿಯೂರಪ್ಪ ಕಾಲ್ನಡಿಗೆಯಲ್ಲಿ ಆಗಮಿಸಿದರು. ಯಡಿಯೂರಪ್ಪ ಬಿಜೆಪಿಗೆ ವಾಪಸಾತಿ ಹೆಚ್ಚಿನ ಮಹತ್ವ ಪಡೆದಿದ್ದು, ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಯಡಿಯೂರಪ್ಪ 6 ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರವನ್ನು ಸ್ಥಾಪಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದಾಗಿನಿಂದ ಯಡಿಯೂರಪ್ಪ ಬಿಜೆಪಿ ಮಡಿಲಿಗೆ ಸೇರುವುದನ್ನು ನಿರೀಕ್ಷಿಸಲಾಗಿತ್ತು. ಮೋದಿಯವರ ನಿಷ್ಠರಾಗಿದ್ದ ಯಡಿಯೂರಪ್ಪ ನರೇಂದ್ರ ಮೋದಿ ಒಬ್ಬರೇ ದೇಶಕ್ಕೆ ಆಶಾಕಿರಣ ಎಂದು ಹೇಳಿದ್ದರು. ದೇಶದಲ್ಲಿ ಕಾಂಗ್ರೆಸ್ ಆಡಳಿತದಿಂದ ಜನರಿಗೆ ನಿರಾಶೆಯಾಗಿದೆ ಎಂದು ಯಡಿಯೂರಪ್ಪ ಹೇಳಿದ್ದರು.

ವೆಬ್ದುನಿಯಾವನ್ನು ಓದಿ