ಮುಂಬಾಗ್ಲಿಂದ ಒಳಬಂದ ಈಶ್ವರಪ್ಪ ಹಿಂಬಾಗ್ಲಿಂದ ಹೋದ್ರು

ಶನಿವಾರ, 30 ನವೆಂಬರ್ 2013 (16:36 IST)
PR
PR
ಬಿಜೆಪಿಯಯನ್ನು ಪ್ರಮುಖ ನಾಯಕರು ತೊರೆದುಹೋದ ಮೇಲೆ ದುರ್ಬಲವಾಗಿರುವ ರಾಜ್ಯ ಬಿಜೆಪಿಗೆ ಮತ್ತೆ ಚೈತನ್ಯ ತುಂಬಲು ರಾಜ್ಯ ಬಿಜೆಪಿ ನಾಯಕರು ಇನ್ನಿಲ್ಲದ ಯತ್ನ ನಡೆಸಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ತೊರೆದುಹೋದ ಮುಖಂಡರನ್ನು ಮತ್ತೆ ಬಿಜೆಪಿಗೆ ಆಹ್ವಾನಿ ಬಿಜೆಪಿಗೆ ಬಲ ತುಂಬುವುದಾಗಿದೆ. ಈ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಬಿಜೆಪಿ ಮುಖಂಡ ಈಶ್ವರಪ್ಪ-ಶ್ರೀರಾಮುಲು ಭೇಟಿ ಕುತೂಹಲ ಮೂಡಿಸಿದೆ. ರೇಣುಕಾಚಾರ್ಯ ನಗರದಲ್ಲಿರುವ ಜಿಲ್ಲಾಧ್ಯಕ್ಷ ಗುರುಲಿಂಗನ ಗೌಡ ನಿವಾಸದಲ್ಲಿ ಈ ಭೇಟಿ ನಡೆಯಿತು. ಸುಮಾರು ಅರ್ಧ ಗಂಟೆಗಳ ಕಾಲ ಇವರಿಬ್ಬರು ಮಾತುಕತೆ ನಡೆಸಿದ್ದಾರೆ. ಶ್ರೀರಾಮುಲು ಕಳೆದ ತಿಂಗಳು ಬಿಜೆಪಿಗೆ ಸೇರ್ಪಡೆಯಾಗುತ್ತಾರೆಂಬ ಊಹಾಪೋಹ ಹರಡಿತ್ತು.

ಮುಂದಿನ ಲೋಕಸಭೆ ಚುನಾವಣೆಗೆ ಶ್ರೀರಾಮುಲು ಮತ್ತು ಯಡಿಯೂರಪ್ಪ ಬಿಜೆಪಿಗೆ ಸೇರಿಕೊಳ್ಳುವ ಬಗ್ಗೆ ಕೇಂದ್ರದ ನಾಯಕರು ಕೂಡ ಒಲವು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಮುಂಬಾಗಿಲಿನಿಂದ ಮನೆಯ ಒಳಕ್ಕೆ ಬಂದಿದ್ದ ಈಶ್ವರಪ್ಪ ಶ್ರೀರಾಮುಲು ಜತೆ ಮಾತುಕತೆಯ ನಂತರ ಮಾಧ್ಯಮಗಳ ಕಣ್ಣುತಪ್ಪಿಸಲು ಹಿಂಭಾಗಿಲಿನಿಂದ ಹೊರಕ್ಕೆ ಹೋದ ಘಟನೆ ನಡೆಯಿತು.

ಯಡಿಯೂರಪ್ಪ ಬಿಜೆಪಿಗೆ ಬರ್ತಾರೆ ಎಂದು ಈಶ್ವರಪ್ಪ ಹೇಳಿದ ಬೆನ್ನಲ್ಲೇ ಈಶ್ವರಪ್ಪ-ಶ್ರೀರಾಮುಲು ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅವರು ಚರ್ಚೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದನ್ನು ತೋರಿಸಿದೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು ಶೀಘ್ರದಲ್ಲೇ ಯಡಿಯೂರಪ್ಪ ಬಿಜೆಪಿಗೆ ಬರಲಿದ್ದು, ಹೈಕಮಾಂಡ್ ಒಲವು ತೋರಿದೆ. ಹಿಂದಿನ 6 ವರ್ಷದ ಬಿಜೆಪಿ ಆಡಳಿತವನ್ನು ಜನರು ಈಗ ನೆನಪಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ಬಗ್ಗೆ ಬೇಸತ್ತಿದ್ದಾರೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ