ಹಾಸನದಲ್ಲಿ ಮತ್ತೆ ದೇವೇಗೌಡರ ಕೊರಳಿಗೆ ವಿಜಯಮಾಲೆ ಬೀಳುತ್ತಾ?

ಬುಧವಾರ, 9 ಏಪ್ರಿಲ್ 2014 (19:46 IST)
PR
PR
ಮಾಜಿ ಪ್ರಧಾನಿಯ ಕ್ಷೇತ್ರ ಹಾಸನ ಕೂಡ ಸಮಸ್ಯೆಗಳಿಂದ ಹೊರತಾಗಿಲ್ಲ. ಮಾಜಿ ಪ್ರಧಾನಿಯ ತವರು ಎನ್ನುವ ಖ್ಯಾತಿ ಇದ್ದರೂ ಅಭಿವೃದ್ಧಿ ಪರ ಯೋಜನೆಗಳು ನಡೆದಿಲ್ಲ ಎಂಬ ದೂರು ಕೇಳಿಬಂದಿದೆ. ಅದಕ್ಕೆ ಸಾಕ್ಷಿ ಹಾಸನದ ರಸ್ತೆಗಳು ಈಗಲೂ ಹಳ್ಳ, ಗುಂಡಿಗಳಿಂದ ಕೂಡಿರುವುದು. ಕೆಲವು ರಸ್ತೆಗಳು ಟಾರನ್ನೇ ಕಾಣದೇ ಎಷ್ಟೋ ವರ್ಷಗಳು ಕಳೆದಿವೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಕಂಗಾಲಾಗಿದ್ದಾರೆ. ಆನೆಗಳ ಹಾವಳಿಯಿಂದ ಅರಣ್ಯ ಭಾಗದ ಜನ ಆತಂಕದಲ್ಲೇ ಬದುಕುವಂತಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಪ್ರೋಗ್ರೆಸ್ ರಿಪೋರ್ಟ್ ಹಿಡಿದುಕೊಂಡು ಮತಯಾಚನೆ ಮಾಡುತ್ತಿದ್ದಾರೆ.

ದೇವೇಗೌಡರು ಇದು ತಮಗೆ ಅಂತಿಮ ಚುನಾವಣೆ ಎನ್ನುವ ಮೂಲಕ ಮತದಾರರ ಮನವೊಲಿಕೆಗೆ ಯತ್ನಿಸಿದ್ದಾರೆ. ಮತದಾರರ ಸಹಾನುಭೂತಿ ಗಳಿಸುವುದಕ್ಕೆ ಧಾರಾಕಾರವಾಗಿ ಕಣ್ಣೀರು ಹರಿಸುತ್ತಾರೆ. ಕಾಂಗ್ರೆಸ್‌ನ ಅಭ್ಯರ್ಥಿ ಎ.ಮಂಜು ಮತ್ತು ಬಿಜೆಪಿಯ ವಿಜಯಶಂಕರ್ ಕೂಡ ಗೆಲ್ಲುವುದಕ್ಕೆ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಆದರೆ ಮತದಾರರು ಅಭ್ಯರ್ಥಿಗಳು ಸೆಳೆಯೋದು ಜಾತಿ ಲೆಕ್ಕಾಚಾರದಿಂದಲೇ. ಒಕ್ಕಲಿಗರ ಒಟ್ಟು ಸಂಖ್ಯೆ 6 ಲಕ್ಷ, ದಲಿತರು 3 ಲಕ್ಷ, ಲಿಂಗಾಯತರು 2,50,000 ಮತದಾರರಿದ್ದಾರೆ.

ಹಾಸನ ಜೆಡಿಎಸ್ ಭದ್ರಕೋಟೆಯಾಗಿದ್ದು, ಹಾಸನ ಕ್ಷೇತ್ರದ ಮೂಲೆ ಮೂಲೆಯಲ್ಲೂ ದೇವೇಗೌಡರು ಜನಪ್ರಿಯರು. ದಲಿತರು ಈ ಬಾರಿಯೂ ಗೌಡರ ಪರ ಒಲವು ಹೊಂದಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಏಳು ಬಾರಿ ಕಾಂಗ್ರೆಸ್, 2 ಬಾರಿ ಜೆಡಿಎಸ್ ಗೆದ್ದಿವೆ.

PR
PR
ಈ ಬಾರಿ ಜೆಡಿಎಸ್ ಪಾಲಾದರೆ ದೇವೇಗೌಡರು ಹ್ಯಾಟ್ರಿಕ್ ಹೀರೋ ಆಗಿ ಹೊಮ್ಮಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲೂ ಅಬ್ಬರದ ಪ್ರಚಾರ ನಡೆದಿದೆ. ಮತದಾರರ ಒಲವು ಯಾರ ಕಡೆಗಿದೆ, ಯಾರ ಕೊರಳಿಗೆ ವಿಜಯಮಾಲೆ ಬೀಳುತ್ತದೆ ಎನ್ನುವುದು ಫಲಿತಾಂಶದ ನಂತರ ಗೊತ್ತಾಗುತ್ತದೆ. ದೇವೇಗೌಡರು ಪ್ರಧಾನಿಯಾಗಿದ್ದವರು ಮತ್ತು ಈ ಬಾರಿ ಕೊನೆಯ ಚುನಾವಣೆ ಎನ್ನುವ ಮಾತು ಅವರಿಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿದೆ. ದೇವೇಗೌಡರು ಕ್ಷೇತ್ರದ ಅಭಿವೃದ್ಧಿ ಕಡೆಗೆ ಸಾಕಷ್ಟು ಗಮನಹರಿಸಿಲ್ಲ ಎನ್ನುವುದು ಮೈನಸ್ ಪಾಯಿಂಟ್.

PR
PR
ಹಾಸನದಿಂದ ದೇವೇಗೌಡರು ಒಟ್ಟು ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. 1991, 1998ರಲ್ಲಿ ಜನತಾದಳ ಅಭ್ಯರ್ಥಿಯಾಗಿ ಎರಡು ಬಾರಿ ಗೆಲುವು ಗಳಿಸಿದ್ದು, 2004 ಮತ್ತು 2009ರಲ್ಲಿ ಎರಡು ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಗಳಿಸಿದ್ದಾರೆ. ಈ ಬಾರಿ ಅದೃಷ್ಟಲಕ್ಷ್ಮಿ ಯಾರಿಗೆ ಒಲಿಯುತ್ತದೆ ಎನ್ನುವುದು ಏಪ್ರಿಲ್ 17ರ ಚುನಾವಣೆ ನಿರ್ಧರಿಸುತ್ತದೆ.

ವೆಬ್ದುನಿಯಾವನ್ನು ಓದಿ