ಅಣ್ಣ ಮತ್ತು ಅತ್ತಿಗೆ ರಾತ್ರಿ ಊಟ ಮಾಡಿ ಮಲಗಿರುವಾಗ ಖತರ್ನಾಕ್ ತಮ್ಮ ರಾತ್ರೋ ರಾತ್ರಿ ಕೋಣೆಗೆ ನುಗ್ಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ತಮ್ಮನಿಂದ ಹಲ್ಲೆಗೊಳಗಾದ ಅಣ್ಣ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರೆ, ಅತ್ತಿಗೆ ಮನೆಯಲ್ಲೇ ಕೊನೆಯುಸಿರು ಎಳೆದಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗುಲ್ಬರ್ಗ ಜಿಲ್ಲೆಯ ಅಫಜಲಪುರದ ಗಾಣಗಾಪುರದ ನಿವಾಸಿಯಾಗಿರುವ 26 ವರ್ಷದ ಅನ್ವರ್ ಸಾಬ್ ಮತ್ತು 24 ವರ್ಷದ ಅಂಜುಂ ಕೊಲೆಯಾದ ದುರ್ದೈವಿಗಳು.
ಅನ್ವರ್ ಸಾಬ್ನ ತಮ್ಮ ನಬೀ ಸಾಬ್ ಕೊಲೆ ಮಾಡಿದ್ದಾನೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಆದರೆ ಅಣ್ಣ ಅನ್ವರ್ ಸಾಬ್ ಮತ್ತು ಅಂಜುಂ ಅವರನ್ನು ಕೊಲೆ ಮಾಡುವಂತಹ ವೈಶಮ್ಯ ಏನಿತ್ತು ಎಂಬುದು ಇನ್ನು ತಿಳಿದುಬಂದಿಲ್ಲ. ಸ್ಥಳಕ್ಕೆ ಧಾವಿಸಿದ ಗಾಣಗಾಪುರ ಪೋಲೀಸರು, ದೂರು ದಾಖಲಿಸಿಕೊಂಡಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.