ಅದಿರು ಕಳ್ಳಸಾಗಣೆ: 55 ಲಾರಿಗಳ ವಶ

ಸೋಮವಾರ, 17 ಡಿಸೆಂಬರ್ 2007 (18:23 IST)
ಅಕ್ರಮವಾಗಿ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ 56 ಲಾರಿಗಳನ್ನು ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಹಾಗೂ ಹಿರಿಯೂರು ಸಮೀಪ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಚಿಕ್ಕಜಾಜೂರು ಸಮೀಪ ಹೊಳಲ್ಕೆರೆ ತಹಶೀಲ್ದಾರ್ರವರು 40 ಲಾರಿಗಳನ್ನು ತಡೆಹಿಡಿದಿದ್ದಾಗ ಆ ಲಾರಿಗಳಿಗೆ ಸಂಬಂಧಪಟ್ಟವರು ಅವರ ಮೇಲೆ ಹಲ್ಲೆಗೂ ಮುಂದಾಗಿದ್ದರು. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿಗಳು ಎಲ್ಲಾ ಲಾರಿಗಳನ್ನೂ ಜಿಲ್ಲಾಡಳಿತದ ವಶಕ್ಕೆ ಪಡೆದರು ಎಂದು ಸುದ್ದಿಮೂಲಗಳು ತಿಳಿಸಿವೆ.

ಇದೇ ರೀತಿಯಲ್ಲಿ ಹೊಸದುರ್ಗದಿಂದ ಹಾಸನಕ್ಕೆ ಹೋಗುತ್ತಿದ್ದ 16 ಲಾರಿಗಳನ್ನು ಹಿರಿಯೂರು ಸಮೀಪ ಹಿರಿಯೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಲವು ವರ್ಷಗಳಿಂದಲೂ ಈ ಬಗೆಯ ಅಕ್ರಮ ಸಾಗಣೆ ನಡೆಯುತ್ತಿದ್ದರೂ ಕೂಡ ಇದನ್ನು ತಡೆಯಲು ಯಾವ ಅಧಿಕಾರಿಗಳಿಂದಲೂ ಸಾಧ್ಯವಾಗಿರಲಿಲ್ಲ. ಹಿರಿಯ ರಾಜಕಾರಣಿಗಳು, ಅಧಿಕಾರಿಗಳು, ಮುಖಂಡರು ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಸಂಬಂಧಿಸಿದ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿತ್ತು ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ