ಅನಂತಮೂರ್ತಿಯನ್ನು ಪೂನಂ ಪಾಂಡೆಗೆ ಹೋಲಿಸಿದ ಆಯನೂರು

ಬುಧವಾರ, 18 ಸೆಪ್ಟಂಬರ್ 2013 (15:07 IST)
PR
PR
ಶಿವಮೊಗ್ಗ:ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಅನೇಕ ಆಟಗಾರರು ಪ್ರಚಾರ ಪಡೆದರು. ಅವರೆಲ್ಲರಿಗಿಂತ ಹೆಚ್ಚಾಗಿ ಚಿತ್ರನಟಿ ಪೂನಂ ಪಾಂಡೆ ಭಾರತ ಗೆಲುವು ಗಳಿಸಿದರೆ ಬೆತ್ತಲೆ ಓಡುತ್ತೇನೆಂದು ಘೋಷಿಸುವ ಮೂಲಕ ಹೆಚ್ಚು ಪ್ರಚಾರ ಪಡೆದಳು. ಅದೇ ರೀತಿ ಮೋದಿ ಪ್ರಧಾನಮಂತ್ರಿಯಾದರೆ ದೇಶ ಬಿಟ್ಟು ತೆರಳುವೆ ಎಂದು ಹೇಳಿರುವ ಅನಂತಮೂರ್ತಿ ನಮ್ಮ ರಾಜ್ಯದ ಪೂನಂ ಪಾಂಡೆ ಎಂದು ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್ ಶಿವಮೊಗ್ಗದಲ್ಲಿ ವ್ಯಂಗ್ಯವಾಡಿದ್ದಾರೆ.

ಸಾಹಿತಿ ಅನಂತಮೂರ್ತಿಗೆ ಪ್ರಚಾರದ ಹುಚ್ಚು. ಅನಂತಮೂರ್ತಿ ಒಬ್ಬ ಅವಕಾಶ ಮೂರ್ತಿ. ಕನ್ನಡ ಸಾರಸ್ವತ ಲೋಕದಲ್ಲಿರುವ ಅನಂತಮೂರ್ತಿಗೆ ಸೈದ್ಧಾಂತಿಕವಾದ ಯಾವುದೇ ನೆಲೆಗಟ್ಟಿಲ್ಲ ಎಂದು ಆಯನೂರು ಮಂಜುನಾಥ್ ಟೀಕಿಸಿದರು. ಈ ಕುರಿತು ಹಿರಿಯ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಅವರ ಪ್ರತಿಕ್ರಿಯೆ ಕೇಳಿದಾಗ, ಇದಕ್ಕೆ ವೈಯಕ್ತಿಕವಾಗಿ ಪ್ರತಿಕ್ರಿಯಿಸಲು ನಾನು ಇಷ್ಟಪಡುವುದಿಲ್ಲ. ಅನಂತಮೂರ್ತಿ ಕಳೆದ 50 ವರ್ಷದಿಂದ ಕೋಮುವಾದದ ವಿರುದ್ಧ ಹೋರಾಟ ಮಾಡುತ್ತಾ ಬಂದವರು. ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.

ಮೋದಿ ಪ್ರಧಾನಿಯಾದರೆ ನಮಗೆ ಈ ದೇಶದಲ್ಲಿ ಬದುಕಿರೋಕ್ಕೆ ಇಷ್ಟವಿಲ್ಲ ಎಂದು ಅನಂತಮೂರ್ತಿ ಹೇಳಿದ್ದರು. ಮೋದಿ ಪ್ರಧಾನಿ ಆಗೇಬಿಡ್ತಾರೆ ಎಂದು ಸಂಘಪರಿವಾದರವರು ನಂಬಿದ್ದಾರೆ ಎಂದು ಮರುಳಸಿದ್ದಪ್ಪ ಹೇಳಿದರು. ಆಯನೂರು ಮಂಜುನಾಥ್ ಹೇಳಿಕೆ ಕುರಿತು ಅನಂತಮೂರ್ತಿ ಪ್ರತಿಕ್ರಿಯೆ ಕೇಳಿದಾಗ,
ನನಗೆ ಗೌರವವಿಲ್ಲದ ಜನರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅನಂತಮೂರ್ತಿ ಹೇಳಿದ್ದಾರೆ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ