ಅಪ್ಪ ಅಮ್ಮನ ಸಂತೋಷಕ್ಕಾಗಿ ಆತ್ಮಹತ್ಯೆ ದಾರಿ ತುಳಿದ ಯುವಕ..!
ಮಂಗಳವಾರ, 12 ನವೆಂಬರ್ 2013 (13:56 IST)
PR
PR
ಅಪ್ಪ.... ಅಮ್ಮ.... ನನ್ನಿಂದ ನೀವು ಪಡಬಾರದ ಕಷ್ಟಪಟ್ಟಿದ್ದೀರಿ. ನನ್ನಿಂದ ಕುಟುಂಬಕ್ಕೆ ನೆಮ್ಮದಿಯಿಲ್ಲ. ನಾನು ಮೂಲಾ ನಕ್ಷತ್ರದಲ್ಲಿ ಹುಟ್ಟಿರುವುದರಿಂದ ನೀವು ಜೀವನ ಪೂರ್ತಿ ಕಷ್ಟ ಪಡಬೇಕಾದಂತಹ ಪರಿಸ್ತಿತಿ ನಿರ್ಮಾಣವಾಗಿದೆ. ನಿಮ್ಮ ಕಷ್ಟಗಳನ್ನು ನನ್ನಿಂದ ನೋಡುವುದಕ್ಕೆ ಆಗುತ್ತಿಲ್ಲ. ಹಾಗಾಗಿ ಸತ್ತು ಹೋಗುತ್ತಿದ್ದೇನೆ. ಪ್ರೀತಿಯ ಸಂಬಂಧಿಕರೇ, ಸ್ನೇಹಿತರೇ ನಾನು ಹೋದ ನಂತರ ನೀವು ನನ್ನ ತಂದೆತಾಯಿಗಳನ್ನು ಆಡಿಕೊಳ್ಳಬೇಡಿ. ನಮ್ಮ ಮನೆಯಲ್ಲಿ ನಾನೊಬ್ಬನೇ ಮೂಲಾ ನಕ್ಷತ್ರದಲ್ಲಿ ಹುಟ್ಟಿರೋದು.. ನನ್ನ ಎಲ್ಲಾ ಜವಾಬ್ದಾರಿಗಳನ್ನು ಬಿಟ್ಟು ದೂರ ಹೋಗುತ್ತಿದ್ದೇನೆ..
- ಇಂತಿ ನಿಮ್ಮ ಪ್ರೀತಿಯ ವಿಜಯಕುಮಾರ್
ಹೀಗೊಂದು ಪತ್ರವನ್ನು ಬರೆದಿಟ್ಟು, ಬದುಕನ್ನೇ ಬೇಡ ಎಂದು ನಿರ್ಧರಿಸಿದ ಯುವಕ ವಿಜಯ್ ಕುಮಾರ್ ಸಾವಿನ ಆಶ್ರಯ ಬಯಸಿ ಮನೆ ಬಿಟ್ಟು ಹೋಗಿದ್ದಾನೆ.
ವಿಜಯ್ ಕುಮಾರ್ ಹುಟ್ಟಿದ್ದು ಮೂಲಾ ನಕ್ಷತ್ರದಲ್ಲಿ. ಹೀಗಾಗಿ ಮನೆಯಲ್ಲಿ ಸಂಭವಿಸುವ ಕಷ್ಟ ನಷ್ಟಗಳಿಗೆಲ್ಲಾ ವಿಜಯ್ ಕುಮಾರನೇ ಕಾರಣ ಎಂದು ಕುಟುಂಬವರ್ಗದವರು ಮತ್ತು ಸಂಬಂಧಿಕರು ಯಾವಾಗಲೂ ದೂರುತ್ತಿದ್ದರು. ಇದರಿಂದ ಬೇಸತ್ತ ವಿಜಯ್ ಕುಮಾರ್ ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದೇ ಮಹಾ ಪಾಪ ಎಂದು ತಿಳಿದು ಸಾವಿನ ಆಸ್ರಯ ಬಯಸಿ ಹೋಗಿದ್ದಾನೆ.
ಬೆಂಗಳೂರಿನ ಗಾರೇಪಾಳ್ಯದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಜಯ್'ಕುಮಾರ್ ತಿಂಗಳಿಗೆ 10-15 ಸಾವಿರ ರುಪಾಯಿ ಸಂಬಳ ಪಡೆಯುತ್ತಿದ್ದ. ಆದ್ರೆ ಮನೆಗೆ ಆಸರೆಯಾಗಿದ್ದ ಮಗ ಇದೀಗ ಆತ್ಮಹತ್ಯೆಯ ದಾರಿ ತುಳಿದು ಪೋಷಕರಿಂದ ದೂರವಾಗಿಬಿಟ್ಟಿದ್ದಾನೆ. ಎಲ್ಲಿದ್ದಾನೆ? ಏನಾಗಿದ್ದಾನೆ ಎಂದು ಪೋಷಕರು ಆತಂಕಗೊಂಡಿದ್ದಾರೆ. ಎಲ್ಲೆಡೆ ಹುಡುಕಿದ್ರೂ, ವಿಜಯ್ಕುಮಾರ್ ಪತ್ತೆಯಿಲ್ಲ.!