ಅಭಿವೃದ್ಧಿಯ ಸೋಗಿನ ಕೋಮುವಾದ ಅಪಾಯಕಾರಿ

ಸೋಮವಾರ, 31 ಡಿಸೆಂಬರ್ 2007 (18:39 IST)
ಗುಜರಾತ್ ರಾಜ್ಯವೂ ಸೇರಿದಂತೆ ಇತರ ರಾಜ್ಯಗಳಲ್ಲಿ ಅಭಿವೃದ್ಧಿಯ ನೆಪವನ್ನು ಮುಂದುಮಾಡಿಕೊಂಡು ಬರುತ್ತಿರುವ ಕೋಮುವಾದ ತುಂಬಾ ಅಪಾಯಕಾರಿ ಎಂದು ಖ್ಯಾತ ಇತಿಹಾಸ ತಜ್ಞ ಪ್ರೊ|ಕೆ.ಎನ್.ಪಣಿಕ್ಕರ್ ತಿಳಿಸಿದ್ದಾರೆ.

ಕೋಮುವಾದ ಮತ್ತು ಭಯೋತ್ಪಾದನೆಗಳ ವಿರುದ್ಧ ಹೋರಾಟ ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು, ಗುಜರಾತ್ ಚುನಾವಣೆಯಲ್ಲಿ ಕಂಡುಬಂದ ಕೋಮುವಾದವನ್ನು ಕಿತ್ತುಹಾಕದಿದ್ದರೆ ಮುಂದೆ ಕಷ್ಟವಾಗಬಹುದು ಎಂದು ಎಚ್ಚರಿಸಿದರು.

ಕೋಮುವಾದವನ್ನು ಪೂರ್ಣಪ್ರಮಾಣದಲ್ಲಿ ಬಿತ್ತಲು ಸಾಧ್ಯವಾಗದ್ದಕ್ಕೆ 2004ರ ಚುನಾವಣೆಯಲ್ಲಿ ಬಿಜೆಪಿ ವಿಫಲವಾಯಿತು. ಆದರೆ ಮುಂದಿನ ದಿನಗಳಲ್ಲಿ ಬಿಜೆಪಿ ಆ ಪ್ರಯತ್ನವನ್ನು ಮಾಡಲಿರುವುದರಿಂದ ಅದನ್ನು ಜಾತ್ಯಾತೀತ ಶಕ್ತಿಗಳು ತಡೆಯಬೇಕಿದೆ ಎಂದು ಪಣಿಕ್ಕರ್ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಮಾತನಾಡಿದ ಭಾಷಾತಜ್ಞ ಪ್ರೊ| ಲಿಂಗದೇವರು ಹಳೆಮನೆ, ಕೋಮುವಾದ ಮತ್ತು ಭಯೋತ್ಪಾದನೆಯ ಸ್ವರೂಪದ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆಯ ಕೊರತೆ ಇದೆ. ಇದನ್ನು ವಿವರಿಸುವ ಕೆಲಸ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ವೆಬ್ದುನಿಯಾವನ್ನು ಓದಿ