ಉದ್ಯಾನನಗರಿಯಲ್ಲಿ ತ್ರಿಪಕ್ಷೀಯ ಸಭೆ: ಭಯೋತ್ಪಾದನೆ ನಿಗ್ರಹಕ್ಕೆ ಪಣ

ಮಂಗಳವಾರ, 27 ಅಕ್ಟೋಬರ್ 2009 (13:21 IST)
PTI
ಭಾರತ, ರಷ್ಯಾ ಹಾಗೂ ಚೀನಾ ದೇಶಗಳ ತ್ರಿಪಕ್ಷೀಯ ಮಾತುಕತೆ ಮಂಗಳವಾರ ಉದ್ಯಾನನಗರಿಯಲ್ಲಿ ನಡೆಯಿತು. ಆರಂಭದಲ್ಲಿ ಭಾರತದ ವಿದೇಶಾಗ ಸಚಿವ ಎಸ್.ಎಂ.ಕೃಷ್ಣ ಉಭಯ ದೇಶಗಳ ವಿದೇಶಾಂಗ ಸಚಿವರಿಗೆ ಮೈಸೂರು ಪೇಟ ತೊಡಿಸಿ ಸ್ವಾಗತಿಸಿದರು.

ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪನೆ ಕುರಿತು ಉದ್ಯಾನನಗರಿಯಲ್ಲಿ ಕಳೆದ 23ವರ್ಷಗಳ ಬಳಿಕ ನಡೆದ ತ್ರಿಪಕ್ಷೀಯ ಮಾತುಕತೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಎಂ.ಕೃಷ್ಣ ತಿಳಿಸಿದರು.

ಇಂದು ಬೆಳಿಗ್ಗೆ ನಡೆದ ತ್ರಿಪಕ್ಷೀಯ ಮಾತುಕತೆ ಅತ್ಯಂತ ಫಲಪ್ರದವಾಗಿತ್ತು ಎಂದು ಬಣ್ಣಿಸಿದ ಅವರು, ಉಗ್ರವಾದದಿಂದ ಮೂರು ದೇಶಗಳಿಗೂ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಮೂರು ರಾಷ್ಟ್ರಗಳು ಒಟ್ಟಾಗಿ ಹೋರಾಡುವ ನಿರ್ಧಾರವನ್ನೂ ಈ ಸಂದರ್ಭದಲ್ಲಿ ಕೈಗೊಳ್ಳಲಾಯಿತು ಎಂದರು.

ತ್ರಿಪಕ್ಷೀಯ ಸಭೆಯಲ್ಲಿ ಅಂತಾರಾಷ್ಟ್ರೀಯ-ರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಅಲ್ಲದೆ, ಹಲವು ವಿಚಾರಗಳ ಕುರಿತು ಒಮ್ಮತದ ನಿರ್ಧಾರಕ್ಕೆ ಬರಲಾಯಿತು ಎಂದು ಹೇಳಿದರು.

ಕೃಷಿ, ವೈದ್ಯಕೀಯ ಕ್ಷೇತ್ರದಲ್ಲಿ ಸಹಭಾಗಿತ್ವ, ಆರ್ಥಿಕ ಕುಸಿತ, ಜಾಗತಿಕ ತಾಪಮಾನ, ಅನಿಲ, ಇಂಧನ ಪೂರೈಕೆ,ಮಾದಕ ದ್ರವ್ಯಗಳ ನಿಯಂತ್ರಣ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸಮಾಲೋಚನೆ ನಡೆಯಿತು ಎಂದು ವಿವರಿಸಿದ ಕೃಷ್ಣ, ಮುಂದಿನ ತ್ರಿಪಕ್ಷೀಯ ಸಭೆಯನ್ನು ಚೀನಾದಲ್ಲಿ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು ಎಂದರು.

ತ್ರಿಪಕ್ಷೀಯ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ , ಚೀನಾ ವಿದೇಶಾಂಗ ಸಚಿವ ಯಾಂಗ್ ಜಯೇಚಿ, ರಷ್ಯಾದ ಸರ್ಗೇಯ್ ಲ್ಯಾವ್ರೋವ್ ಹಾಗೂ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ವೆಬ್ದುನಿಯಾವನ್ನು ಓದಿ