ಎಸ್‌ಇಝಡ್: ಸ್ವಾಮೀಜಿಗಳ ಎದುರೇ ಜಟಾಪಟಿ

ಸೋಮವಾರ, 17 ನವೆಂಬರ್ 2008 (10:38 IST)
ಮಂಗಳೂರು ವಿಶೇಷ ಆರ್ಥಿಕ ವಲಯ(ಎಂಎಸ್ಇಝಡ್)ಕ್ಕೆ ಸಂಬಂಧಿಸಿ ವಾಸ್ತವಾಂಶ ತಿಳಿಯಲು ಆಗಮಿಸಿದ ಹಿರಿಯ ಸ್ವಾಮೀಜಿಗಳ ಎದುರೇ ಎಂಎಸ್ಇಝಡ್‌ನ ಪರ ಹಾಗೂ ವಿರೋಧಿ ಬಣಗಳ ನಡುವೆ ಜಟಾಪಟಿ ನಡೆದಿದೆ.

ಬಜೆಪೆಯ ಪೆರ್ಮುದೆ ಕುಡುಬಿ ಪದವಿನ ಸುಮಾರು 15.3 ಎಕರೆ ಭೂಮಿಗೆ ಸಂಬಂಧಿಸಿ ಕೆಲವು ಸಮಯದಿಂದ ವಿವಾದ ಉಂಟಾಗಿತ್ತು. ಈ ಕುರಿತು ಮಾಹಿತಿ ಪಡೆಯುವ ನಿಟ್ಟಿನಲ್ಲಿ ಪೇಜಾವರ ಶ್ರೀ ಸ್ವಾಮೀಜಿ ಸೇರಿಂದತೆ ಹಲವು ಮಠದ ಸ್ವಾಮೀಜಿಗಳು ಸ್ಥಳ ಪರಿಶೀಲನೆಗೆ ತೆರಳಿದ್ದರು.

ಸ್ಥಳೀಯರಿಂದ ಮಾಹಿತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಆಗಮಿಸಿದ ಎಂಎಸ್ಇಝಡ್ ಅಧಿಕಾರಿಗಳು ದಾಖಲೆಗಳನ್ನು ತೋರಿಸಿ ವಾದ ಮಂಡಿಸಿದರು. ಆದರೆ ಇದನ್ನು ನಿರಾಕರಿಸಿದ ಕುಡುಬಿ ಜನಾಂಗದವರು ನಾವು ಅನಕ್ಷರಸ್ಥರಾಗಿದ್ದು ಬಲತ್ಕಾರವಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ದೂರಿದರು. ಇದರಿಂದ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಒಂದು ಹಂತದಲ್ಲಿ ವಾತಾವರಣ ಉದ್ವಿಗ್ನಗೊಂಡಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಗಳು, ನಾವು ಸತ್ಯಾಂಶ ಅರಿಯಲು ಬಂದಿದ್ದೇವೆ. ನಮ್ಮ ಎದುರೇ ಗೂಂಡಾಗಿರಿ ನಡೆಯುವುದು ಸಲ್ಲದು. ಸತ್ಯ ವಿಷಯ ತಿಳಿಯಬೇಕಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ