ಕಾಂಗ್ರೆಸ್‌ಗೆ ನಾಯಕರ ಕೊರತೆ ಇಲ್ಲ: ಪರಮೇಶ್ವರ್ ನುಡಿ

ಶನಿವಾರ, 31 ಡಿಸೆಂಬರ್ 2011 (11:46 IST)
PR
ಪ್ರತಿಯೊಂದು ಪಕ್ಷದಲ್ಲೂ ಭಿನ್ನಾಭಿಪ್ರಾಯ ಸಹಜ. ಕಾಂಗ್ರೆಸ್‌ನ ಕೆಲ ಶಾಸಕರು ಪಕ್ಷದಲ್ಲಿ ಅಧಿಕಾರ ಕೇಳಿದ್ದು, ಈ ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೊತೆ ಚರ್ಚಿಸಿದ್ದೇವೆ. ಯಾವುದೇ ಶಾಸಕರು ಎನ್‌ಸಿಪಿ ಸೇರುವ ಅಥವಾ ನಮ್ಮ ಪಕ್ಷ ತೊರೆಯುವ ಪ್ರಮೇಯ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಶ್ವಾಸವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವುದೇ ಒಬ್ಬ ನಾಯಕರ ಮೇಲೆ ಅವಲಂಬಿತವಾಗಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿರುವ ಶತಮಾನಗಳ ಇತಿಹಾಸ ಹೊಂದಿರುವ ಪಕ್ಷ ನಮ್ಮದು. ನಮ್ಮ ಪಕ್ಷದಲ್ಲಿ ನಾಯಕರಿಗೇನೂ ಬರವಿಲ್ಲ. ಯುಪಿಎ ಸರ್ಕಾರದಲ್ಲಿ ಎಸ್ಸೆಂ ಕೃಷ್ಣ, ಮೊಯ್ಲಿ, ಖರ್ಗೆ, ಮುನಿಯಪ್ಪ ಅವರಂತಹ ನಾಯಕರು ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಇಂತಹ ಪಕ್ಷದಲ್ಲಿ ನಾಯಕರಿಗೆ, ಸಾಮೂಹಿಕ ನಾಯಕತ್ವಕ್ಕೆ ಎಂದಿಗೂ ಕೊರೆತೆಯಾಗುವುದಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷರಾದವರೇ ಚುನಾವಣೆ ನೇತೃತ್ವ ವಹಿಸುತ್ತಾರೆ, ಮುಖ್ಯಮಂತ್ರಿ ಅಭ್ಯರ್ಥಿಯೂ ಅಧ್ಯಕ್ಷರೇ ಆಗಿರುತ್ತಾರೆ ಎಂಬುದು ಒಂದು ಸಂಪ್ರದಾಯ ಅಷ್ಟೇ. ಸಂಪ್ರದಾಯದಲ್ಲಿ ಸಾಗುವ ಪಕ್ಷ ನಮ್ಮದು. 22 ಉಪ ಚುನಾವಣೆಯಲ್ಲಿ 20ರಲ್ಲಿ ನಾವು ಸೋತ ಮಾತ್ರಕ್ಕೆ ಸೋತು ಸುಣ್ಣವಂತೂ ಆಗಿಲ್ಲ. ಉಪ ಚುನಾವಣೆಗಳು ಚುನಾವಣೆ ದಿಕ್ಸೂಚಿ ಆಗಲಾರವು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ನಮ್ಮ ಗೋಳು ಕೇಳುವವರೇ ಇಲ್ಲ. ಹಾಗಾಗಿ ನಾವು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಎನ್‌ಸಿಪಿ ಸೇರಲು ಸಿದ್ದತೆ ಮಾಡಿಕೊಂಡಿರುವುದಾಗಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ಬಿ.ಸಿ.ಪಾಟೀಲ್ ಬಹಿರಂಗವಾಗಿ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಾಗಿ ಪರಮೇಶ್ವರ್ ಈ ಸಮಜಾಯಿಷಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ