ಕಾಂಗ್ರೆಸ್ ಪ್ರತಿಭಟನೆ ನಡುವೆ ಬಿಬಿಎಂಪಿ ಬಜೆಟ್ ಮಂಡನೆ

ಶುಕ್ರವಾರ, 26 ಜುಲೈ 2013 (13:33 IST)
PR
PR
ಬೆಂಗಳೂರು: ಕಾಂಗ್ರೆಸ್ ಸದಸ್ಯರಿಂದ ಕಪ್ಪು ಪಟ್ಟಿ ಧರಿಸಿದ ಪ್ರತಿಭಟನೆ ನಡುವೆ ಬಿಬಿಎಂಪಿ ಮೇಯರ್ ವೆಂಕಟೇಶ್ ಮೂರ್ತಿ ಅವರು 8519. 66 ಕೋಟಿ ರೂ ಬಿಬಿಎಂಪಿ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ ನಗರದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಮೇಯರ್ ಪ್ರಕಟಿಸಿದರು.

ಎಸ್‌ಸಿ-ಎಸ್‌ಟಿಗೆ ಗೃಹನಿರ್ಮಾಣ, ಜೈಬೀಮಾ ಗೃಹನಿರ್ಮಾಣ ಯೋಜನೆ, ವಿದೇಶಿ ವ್ಯಾಸಂಗಕ್ಕೆ 500 ಕೋಟಿ ರೂ.ಉಕ್ಕಿನ ಸೇತುವೆ ನಿರ್ಮಾಣಕ್ಕೆ 8 ಕೋಟಿ ರೂ., ಆಪ್ಟಿಕಲ್ ಫೈಬರ್ ಕೇಬಲ್ ನೀತಿ ಜಾರಿ, ಘನ ತ್ಯಾಜ್ಯ ನಿರ್ವಹಣೆಗೆ 100 ಕೋಟಿ ಮಹಿಲಾ ಕಲ್ಯಾಣಕ್ಕೆ 670 ಕೋಟಿ, ಬಿಬಿಎಂಪಿ ಹೆರಿಗೆ ಆಸ್ಪತ್ರೆ ಮುಂತಾದ ಹಲವಾರು ಯೋಜನೆಗಳನ್ನು ಮೇಯರ್ ಪ್ರಕಟಿಸಿದರು.

ಬಜೆಟ್ ಮಂಡನೆಗೆ ವಿರೋಧ ಸೂಚಿಸಿದ ಕಾಂಗ್ರೆಸ್ ಸದಸ್ಯರು ಬೋಗಸ್ ಬಜೆಟ್ ಎಂದು ಆರೋಪಿಸಿದರು. ಬಜೆಟ್ ಮಂಡನೆ ಸಂದರ್ಭದಲ್ಲಿ ತೀವ್ರ ಗಲಾಟೆ, ಗೌಜು ನಡೆದು ಗದ್ದಲದ ವಾತಾವರಣ ಉಂಟಾಯಿತು. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಪೋರೇಟರ್‌ಗಳ ನಡುವೆ ತೀವ್ರ ವಾಗ್ವಾದ ನಡೆದು, ಕೋಲಾಹಲಕರ ವಾತಾವರಣ ಉಂಟಾಯಿತು. ಕೆಲವು ಸದಸ್ಯರು ಕೈ, ಕೈ ಮಿಲಾಯಿಸುವ ಹಂತವನ್ನು ತಲುಪಿದರು. ಸ್ವಲ್ಪ ಹೊತ್ತು ಗಲಾಟೆ ಮಾಡಿದ ಕಾಂಗ್ರೆಸ್ ಸದಸ್ಯರು ನಂತರ ಸಾವಧಾನಚಿತ್ತರಾಗಿ ಬಜೆಟ್ ಭಾಷಣವನ್ನು ಕೇಳಿದರು.

PTI
PTI
ಕಾಂಗ್ರೆಸ್ ಗದ್ದಲ, ಗೌಜು: ಬಜೆಟ್ ಮಂಡಿಸುವ ವೇಳೆ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಅವರು ಆಕ್ರೋಶಭರಿತರಾಗಿ ಬಜೆಟ್ ಪ್ರತಿಗಳನ್ನು ತೂರಿದ ಘಟನೆ ನಡೆದಿದೆ. ಮುನಿರತ್ನ ಅವರು ಮೇಯರ್ ಪೀಠಕ್ಕೆ ನುಗ್ಗಿ ಬಜೆಟ್ ಪ್ರತಿಗಳನ್ನು ಕಿತ್ತು ಬಿಸಾಡಿದರು. ಸದಸ್ಯರು ಅವರನ್ನು ಸಮಾಧಾನಪಡಿಸಲು ಯತ್ನಿಸಿದರೂ ಯಾವುದೂ ಫಲ ನೀಡಲಿಲ್ಲ. ತಮ್ಮ ಕ್ಷೇತ್ರಕ್ಕೆ ಯಾವುದೇ ಅನುದಾನವನ್ನು ಕಲ್ಪಿಸಿಲ್ಲ ಎಂದು ಮುನಿರತ್ನ ಆಕ್ರೋಶಭರಿತರಾಗಿದ್ದರು.

ದಯವಿಟ್ಟು ಕುಳಿತುಕೊಳ್ಳಿ, ಆ ರೀತಿ ಮಾಡಬೇಡಿ ಎಂಬ ಮನವಿ ನಡುವೆ ಮುನಿರತ್ನ ಕೆರಳಿ ಕೆಂಡವಾಗಿ ಆಕ್ರೋಶಭರಿತ ವರ್ತನೆ ತೋರಿಸಿದರು. ಮುನಿರತ್ನ ಅವರ ವರ್ತನೆ ಸರೀನಾ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.

ವೆಬ್ದುನಿಯಾವನ್ನು ಓದಿ