ಕುಮಾರಸ್ವಾಮಿ ಕೊಕ್ಕರೆ, ವೀರಪ್ಪಾ ಮೊಯ್ಲಿ ಮಹಾ ಭ್ರಷ್ಟ: ಬಿಜೆಪಿ

ಸೋಮವಾರ, 31 ಮಾರ್ಚ್ 2014 (14:09 IST)
PR
ಕೇಂದ್ರ ಸಚಿವ ಮೊಯ್ಲಿ ಸುಳ್ಳುಗಾರ, ಭ್ರಷ್ಟ. ಕುಮಾರಸ್ವಾಮಿ ನೀರಿದ್ದ ಕಡೆ ಹೋಗುವ ಕೊಕ್ಕರೆಯಿದ್ದಂತೆ' ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಅವರು ತಮ್ಮ ಎದುರಾಳಿಗಳನ್ನು ಬಣ್ಣಿಸಿದ ವೈಖರಿಯಿದು.

ಕೇಂದ್ರ ಸಚಿವರಾಗಿದ್ದುಕೊಂಡು ಕೇವಲ ಸುಳ್ಳುಗಳನ್ನು ಹೇಳಿಕೊಂಡು ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಅಭಿವೃದ್ಧಿಯಿಂದ ವಿಮುಖ ಮಾಡಿದ ಖ್ಯಾತಿಗೆ ಮೊಯ್ಲಿ ಪಾತ್ರರಾಗಿದ್ದಾರೆ. ಸಂಸದ ಅಥವಾ ಸಚಿವರಾಗಿ ಕ್ಷೇತ್ರಕ್ಕೆ ಯಾವುದೇ ಕೆಲಸ ಮಾಡಲಿಲ್ಲ. ಬದಲಾಗಿ ಚಿಕ್ಕಬಳ್ಳಾಪುರದಲ್ಲಿ ಕೆಲಸಕ್ಕೆ ಬಾರದ ರಾಜಕೀಯ ಮಾಡುತ್ತ ಕುಳಿತಿದ್ದಾರೆ ಎಂದು ಅವರು ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಿಡಿಕಾರಿದರು.

ಕುಮಾರಸ್ವಾಮಿ ಅವರು ವಿಧಾನಸಭೆ ಚುನಾವಣೆಗೆ ನಿಲ್ಲುವ ಸಲುವಾಗಿ 6 ತಿಂಗಳ ಹಿಂದೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರು. ಈಗ ಮತ್ತೆ ಲೋಕಸಭೆಗೆ ನಿಲ್ಲಲು ರಾಮನಗರ ವಿಧಾನಸಭೆ ಕ್ಷೇತ್ರದಿಂದ ದೂರವಾಗುತ್ತಿದ್ದಾರೆ. ತಮ್ಮ ರಾಜಕೀಯ ಆಕಾಂಕ್ಷೆಗೆ ಮರು ಚುನಾವಣೆಗಳ ಸರಣಿ ಪಂದ್ಯ ನಡೆಸುತ್ತಿದ್ದಾರೆ ಎಂದು ಬಚ್ಚೇಗೌಡ ಆಕ್ರೋಶವ್ಯಕ್ತಪಡಿಸಿದರು.

ನಗುವ ಹೆಂಗಸರನ್ನು, ಅಳುವ ಗಂಡಸರನ್ನು ನಂಬಬಾರದು ಎಂಬ ಗಾದೆಯಿದೆ. ಹಾಗೆಯೇ ರಾಮನಗರಕ್ಕೆ ಹೋಗಿ ಈ ಕ್ಷೇತ್ರವನ್ನು ಕೈಬಿಡುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಆದ್ದರಿಂದ ಚಿಕ್ಕಬಳ್ಳಾಪುರದ ಜನತೆ ಅವರಿಗೆ ಅವಕಾಶ ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ರೈತರ ಪಕ್ಷ ರಿಯಲ್ ಎಸ್ಟೇಟ್ ದಲ್ಲಾಳಿ: ಜೆಡಿಎಸ್ ರೈತರ ಪಕ್ಷ ಎಂಬ ಕಾರಣದಿಂದ ಪಕ್ಷ ವಿಭಜನೆ ಸಂದರ್ಭದಲ್ಲಿ ದೇವೇಗೌಡರ ಬೆನ್ನಿಗೆ ನಾವು ನಿಂತಿದ್ದೆವು. ಆದರೆ ಪಕ್ಷವು ದಿನದಿಂದ ದಿನಕ್ಕೆ ರಿಯಲ್ ಎಸ್ಟೇಟ್ ದಲ್ಲಾಳಿಗಳ ಕೈಗೊಂಬೆಯಾಗುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಸಮಾಜ ಘಾತುಕ ಶಕ್ತಿಗಳ ಕೈಗೆ ನೀಡಲಾಗಿದೆ. ಅಲ್ಲಿನ ಯುವಕರನ್ನು ಪಕ್ಷದ ನಾಯಕರು ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಸೇರಿದ ಮಾಜಿ ಶಾಸಕಿ ಜ್ಯೋತಿ ರೆಡ್ಡಿ ಹೇಳಿದರು.

ವೆಬ್ದುನಿಯಾವನ್ನು ಓದಿ