ಕೆಂಪಮ್ಮ ಕೊಲೆಯ ಸರಮಾಲೆಗೆ ಮತ್ತೊಂದು ಮಣಿ

ಶುಕ್ರವಾರ, 25 ಜನವರಿ 2008 (13:29 IST)
ಕಷ್ಟಗಳನ್ನು ದೇವರ ಮುಂದೆ ತೋಡಿಕೊಂಡು ಪರಿಹಾರ ಬೇಡಲು ಬರುವ ಅಮಾಯಕ ಹೆಣ್ಣುಮಕ್ಕಳನ್ನು ತನ್ನು ಹರಿತವಾದ ಮಾತುಗಳಿಂದ ಮನವೊಲಿಸಿ ಬೇರೆಡೆಗೆ ಕರೆದೊಯ್ದು, ಇಂಥಾ ಪೂಜೆ ಮಾಡಿದರೆ ನಿಮ್ಮ ಕಷ್ಟಗಳೆಲ್ಲಾ ತೀರುತ್ತವೆ ಎಂದು ನಂಬಿಸಿ ನಂತರ ಅವರು ಕಣ್ಣು ಮುಚ್ಚಿ ಧ್ಯಾನ ಮಾಡುತ್ತಿದ್ದಾಗ ಕೊಲೆಗೈದು ಅವರ ಆಭರಣಗಳನ್ನು ಅಪಹರಿಸುತ್ತಿದ್ದ ಕೆಂಪಮ್ಮ ಎಂಬ ಸರಣಿ ಹಂತಕಿ ಮಾಡಿದ ಕೊಲೆಯ ಸರಮಾಲೆಗೆ ಮತ್ತೊಂದು ಮಣಿ ಸೇರಿದೆ.

ಚಿಂತಾಮಣಿಯ ರೇಣುಕಾ ಎಂಬ ಮಹಿಳೆಯೋರ್ವಳನ್ನು ಇದೇ ರೀತಿ ನಂಬಿಸಿ, ಚಿಂತಾಮಣಿಯ ಲಾಡ್ಜ್ ಒಂದರಲ್ಲಿ ಕೊಲೆ ಮಾಡಿದ್ದು ಈಗ ಬೆಳಕಿಗೆ ಬಂದಿದೆ. ಕಲಾಸಿಪಾಳ್ಯ ಪೊಲೀಸರ ತನಿಖೆಯ ನಂತರ ಈ 7ನೆಯ ಕೊಲೆಯ ವಿಷಯ ಹೊರಬಿದ್ದಿದ್ದು, ಇದಕ್ಕಾಗಿ ಕೆಂಪಮ್ಮ ಸೈನೈಡ್ ಬಳಸುತ್ತಿದ್ದಳು ಎಂಬ ಅಂಶವೂ ಬಹಿರಂಗವಾಗಿದೆ.

ಕೆಂಪಮ್ಮನಂತಹ ಸಾಧಾರಣ ವ್ಯಕ್ತಿತ್ವದಂತೆ ತೋರುವ ಹೆಣ್ಣಿಗೆ ಸೈನೈಡ್ ಸಿಕ್ಕಿದ್ದಾದರೂ ಹೇಗೆ ಎಂಬ ಕುರಿತು ಭೇದಿಸಿದಾಗ ಚಿನ್ನಬೆಳ್ಳಿ ಕೆಲಸ ಮಾಡುವ ಕೆಲಸಗಾರರಿಂದ ಇದು ಸುಲಭವಾಗಿ ಅಕೆಗೆ ದೊರೆಯುತ್ತಿತ್ತು; ಇದನ್ನು ಬಳಸಿದಾಗ ಅಮಾಯಕರ ದೇಹದೊಳಕ್ಕೆ ಸುಲಭವಾಗಿ ಸೇರುತ್ತಿತ್ತಾದ್ದರಿಂದ ಕೊಲೆ ಮಾಡುವುದು ಆಕೆಗೆ ರೇಜಿಗೆಯ ಕೆಲಸವಾಗಿರಲಿಲ್ಲ ಎಂಬ ಅಂಶ ಈಕೆಯ ಚಾಣಾಕ್ಷತೆಯನ್ನು ಬಯಲುಮಾಡಿದೆ.

ಈಗಾಗಲೇ ಈಕೆ ಒಟ್ಟು 12 ಕೊಲೆಗಳನ್ನು ಮಾಡಿರಬಹುದೆಂಬುದು ಪೊಲೀಸರ ಅಭಿಪ್ರಾಯವಾಗಿದ್ದು, ನಾರ್ಕೋ ಅನಾಲಿಸಿಸ್ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳಿಗೆ ಇವಳನ್ನು ಒಳಪಡಿಸುವುದರಿಂದ ತನಿಖೆಗೆ ಹೆಚ್ಚಿನ ನೆರವಾಗಬಹುದು ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ