ಶ್ರೀರಂಗಪಟ್ಟಣ: ಗೂಳಿತಿಟ್ಟಿನಿಂದ ಬಾಬುರಾಯನಕೊಪ್ಪಲು ಗ್ರಾಮವೊಂದಕ್ಕೆ ನದಿಯಲ್ಲಿ ಕೊಚ್ಚಿಕೊಂಡು ಬಂದಿದ್ದ ಮದವೇರಿದ ಗೂಳಿಯೊಂದನ್ನು ಹಿಡಿಯುವಷ್ಟರಲ್ಲಿ ಅರಣ್ಯ ಇಲಾಖೆ ಸುಸ್ತೋ ಸುಸ್ತು. ಗೂಳಿ ಅವರಿಂದ ತಪ್ಪಿಸಿಕೊಂಡು ಅತ್ತಿಂದಿತ್ತ ಸುಮಾರು ಐದಾರು ಕಿಮೀ ದೂರದವರೆಗೆ ಅವರ ಕೈಗೆ ಸಿಗದೇ ಓಡಾಡಿತು. ಗ್ರಾಮದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದ ಗೂಳಿಗೆ ಬೇರೆ ದಾರಿ ತೋಚದೇ ಅರಿವಳಿಕೆ ಇಂಜೆಕ್ಷನ್ ನೀಡಿದ ನಂತರ ಇಂಜೆಕ್ಷನ್ ಪ್ರಭಾವದಿಂದ ಕುಸಿದುಬಿತ್ತು.
ನಂತರ ಕಾಲುಗಳಿಗೆ ಹಗ್ಗ ಕಟ್ಟಿ ಟ್ರಾಕ್ಟರ್ ಮೂಲಕ ಸಾಗಿಸಿ ,ರಂಗನತಿಟ್ಟಿನ ಪಕ್ಷಿಧಾಮದ ಸಮೀಪವಿರುವ ಗೂಳಿತಿಟ್ಟಿನಲ್ಲಿ 15ರಿಂದ 20 ಮದವೇರಿದ ಗೂಳಿಗಳಿದ್ದು ಅವುಗಳ ಜತೆ ಈ ಗೂಳಿಯನ್ನು ಸಹ ಬಿಡಲಾಯಿತು. ರಂಗನತಿಟ್ಟು ಪಕ್ಷಿಧಾಮ ಪ್ರವಾಹದ ನೀರಿನಿಂದ ಆಂಶಿಕವಾಗಿ ಮುಳುಗಿದಾಗ ಗೂಳಿತಿಟ್ಟು ಸಹ ಮುಳುಗಿತ್ತು. ಈ ಹಿನ್ನೆಲೆಯಲ್ಲಿ ಗೂಳಿತಿಟ್ಟಿನಿಂದ ಹೊರಕ್ಕೆ ಬಂದಿದ್ದ ಗೂಳಿ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಬಂದಿತ್ತು.